ವಿಜೃಂಭಣೆಯಿಂದ ನೆರವೇರಿದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿಯಲ್ಲಿ ಇರುವ ಐತಿಹಾಸಿಕ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಹುಣಸಮಾರನಹಳ್ಳಿ ಶ್ರೀ ಮಠದ ವತಿಯಿಂದ ಸುಮಾರು ಐನೂರು ವರ್ಷಗಳಿಂದ ನೆರವೇರುತ್ತಾ ಬಂದಿರುವ ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವಕ್ಕೆ ತನ್ನದೇ ಆದ ವಿಶಿಷ್ಟತೆ ಮತ್ತು ಐತಿಹ್ಯವಿದ್ದು, ಸುತ್ತ ಹದಿನಾಲ್ಕು ಹಳ್ಳಿಗಳ ಸ್ವಾಮಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳತ್ತಾರೆ.

ರಥೋತ್ಸವ ಕುರಿತು ಹುಣಸಮಾರನಹಳ್ಳಿ ಶ್ರೀ ಮಠದ ಪಟ್ಟದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ‘ಹುಣಸಮಾರನಹಳ್ಳಿ ಯಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಪ್ರತಿವರ್ಷ ವಿಜೃಂಭಣೆಯ ರಥೋತ್ಸವ ನೆರವೇರಿಸಲಾಗುತ್ತಿದ್ದು, ಸ್ವಾಮಿಯ ಇಚ್ಛೆಯಂತೆ, ಪರಮಪೂಜ್ಯ ಪಟ್ಟದ ಶ್ರೀ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದದೊಂದಿಗೆ ರಥೋತ್ಸವ ನೆರವೇರಿಸಲಾಗುತ್ತಿದೆ. ರಥೋತ್ಸವದ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸಲಾಗಯವುದು. ಮೊದಲದಿನ ಅಂಕುರಾರ್ಪಣ, ಸಿಂಹವಾಹನೋತ್ಸವ, ಎರಡನೆಯ ದಿನ ಧ್ವಜಾರೋಹಣ, ಗಜವಾಹನೋತ್ಸವ, ಮೂರನೆಯ ದಿನ ಗಿರಿಜಾ ಕಲ್ಯಾಣೋತ್ಸವ, ವೃಷಭ ವಾಹನೀತ್ಸವ ನೆರವೇರಿದ್ದು, ಶುಕ್ರವಾರವಾದ ಇಂದು ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವ ನೆರವೇರಿದೆ. ರಥೋತ್ಸವದ ಮುಂದುವರಿದ ಭಾಗವಾಗಿ ಶನಿವಾರ ನಂದಿವಾಹನೋತ್ಸವ, ಭಾನುವಾರ ಚಿತ್ರಗೋಪುರೋತ್ಸವ, ಸೋಮವಾರ ವಸಂತೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವದೊಂದಿಗೆ ರಥೋತ್ಸವ ಕಾರ್ಯಕ್ರಮ ತೆರೆ ಕಾಣಲಿದೆ, ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದು ರಥೋತ್ಸವ ಕುರಿತು ಮಾಹಿತಿ ನೀಡಿದರು.

ರಥೋತ್ಸವದ ಈ ದೈವ ಕಾರ್ಯದಲ್ಲಿ ಬೆಂಗಳೂರು ನಗರದ ಗಂಜಾಂ ಮಠದ ಶ್ರೀ ಚಿದ್ಘನ ಸ್ವಾಮೀಜಿ, ಕಿರಿಯ ಶ್ರೀಗಳಾದ ಅಮೃತಕುಮಾರ ಸ್ವಾಮೀಜಿ, ತಮಿಳು ನಾಡಿನ ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಮಿಳು ನಾಡಿನ ಬಳ್ಳನಪುರ ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮಾಲೂರಿನ ಬೆಳ್ಳಾವಿ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಮಠದ ಶ್ರೀ ಮಹದೇವ ಸ್ವಾಮೀಜಿ, ತಮಿಳು ನಾಡಿನ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ ಪಾಲ್ಗೊಂಡು, ರಥೋತ್ಸವಕ್ಕೆ ವಿಶೇಷತೆಯ ಮೆರಗು ನೀಡಿದರು.

Leave a Reply

Your email address will not be published. Required fields are marked *