





ಅಂಬೇಡ್ಕರ್ ಪುತ್ತಳಿ ಅನಾವರಣ ವಿಳಂಬ :
ಪ್ರಜಾ ವಿಮೋಚನಾ ಚಳವಳಿ(ಸ್ವಾಭಿಮಾನ)ಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ :
ಯಲಹಂಕ : ಯಲಹಂಕ ಮಿನಿವಿಧಾನ ಸೌಧದ ಮುಂದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ನಿರ್ಮಿಸಿ ಎರಡು ವರ್ಷಗಳು ಕಳೆದಿದ್ದರೂ ಅದನ್ನು ಅನಾವರಣಗೊಳಿಸದೆ, ರಾಜ್ಯ ಸರ್ಕಾರ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ(ಸ್ವಾಭಿಮಾನ)ಯ ನೂರಾರು ಕಾರ್ಯಕರ್ತರು ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ನೇತೃತ್ವದಲ್ಲಿ ಯಲಹಂಕ ಮಿನಿ ವಿಧಾನ ಸೌಧದ ಮುಂದೆ ಬೃಹತ್ ತಮಟೆ ಚಳುವಳಿ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಪಿವಿಸಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಇಲ್ಲಿ ನಿರ್ಮಾಣಗೊಂಡು ಎರಡೂ ವರ್ಷಗಳೇ ಕಳೆದಿವೆ, ಅದನ್ನು ಸೂಕ್ತ ಕಾಲದಲ್ಲಿ ಅನಾವರಣಗೊಳಿಸಿ ಸಂವಿಧಾನ ಶಿಲ್ಪಿ ಯನ್ನು ಗೌರವಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಅನಾವರಣಗೊಳಿಸುವ ಗೋಜಿಗೆ ಹೋಗದೆ, ಪ್ರತಿಮೆಗೆ ಪ್ಲಾಸ್ಟಿಕ್ ಚೀಲ ಮುಚ್ಚಿ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ. ಮಾತೆತ್ತಿದರೆ ನಾವು ಜಾತ್ಯಾತೀತ ವಾದಿಗಳು, ದಲಿತರ ಪರವಾಗಿ ಇರುವವರು ಎಂದು ಹೇಳುತ್ತಾ ಮತ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರದ್ದು ಅದಿನ್ನೆಂಥ ಜಾತ್ಯಾತೀತ ವಾದವೋ, ದಲಿತ ಪರವಾದ ನಿಲುವೋ ತಿಳಿಯುತ್ತಿಲ್ಲ, ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸದ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ನಮ್ಮ ತೀವ್ರ ವಿರೋಧವಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಏಪ್ರಿಲ್ 14ರ ಒಳಗಾಗಿ ಅಂಬೇಡ್ಕರ್ ಅವರ ಈ ಪ್ರತಿಮೆಯನ್ನು ಅನಾವರಣಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವುದರ ಜೊತೆಗೆ ರಾಜ್ಯದ ದಲಿತ ಸಮುದಾಯದ ಪ್ರತಿ ನಾಗರೀಕರಿಂದ ಒಂದೊಂದು ರೂಪಾಯಿ ಚಂದಾ ಹಣ ಎತ್ತಿ ಪ್ರತಿಮೆ ಅನಾವರಣ ಗೊಳಿಸುತ್ತೇವೆ, ಉಳಿದ ಅಲ್ಪಸ್ವಲ್ಪ ಹಣವನ್ನು ರಾಜ್ಯದ ಕಾಂಗ್ರೆಸ್ ಮುಖಂಡರು, ಸಚಿವರಿಗೆ ಉಡುಗೊರೆ ರೂಪದಲ್ಲಿ ನೀಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಪಿವಿಸಿ(ಸ್ವಾಭಿಮಾನ) ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್, ಹಿರಿಯ ದಲಿತಪರ ಹೋರಾಟಗಾರ ಹೆಬ್ಬಾಳ ವೆಂಕಟೇಶ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಿವಿಸಿ(ಸ್ವಾಭಿಮಾನ) ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ವಸೀಂ ಬೇಗ್, ನಗರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಭಿಲಾಶ್ ಕುಮಾರ್ ಎಂ., ಗೌರವಾಧ್ಯಕ್ಷ ಶಿವು ಶಿವಪುರ, ಉಪಾಧ್ಯಕ್ಷ ಸತೀಶ್ ಕುಮಾರ್, ಯಲಹಂಕ ತಾಲ್ಲೂಕು ಘಟಕದ ಅಧ್ಯಕ್ಷ ಕಾಂತರಾಜು ಬೆಳ್ಳಳ್ಳಿ, ಪ್ರಧಾನ ಕಾರ್ಯದರ್ಶಿ ಕಾರ್ತೀಕ್ ಎಚ್.ಎನ್., ಪಿವಿಸಿ ಹಿರಿಯ ಮುಖಂಡ ಥಣಿಸಂದ್ರ ಚಂದ್ರು, ಸಂಘಟನಾ ಕಾರ್ಯದರ್ಶಿ ಕಾಡಪ್ಪ ಜಮಖಂಡಿ, ಯಲಹಂಕ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ದಲಿತ ಮುಖಂಡರಾದ ಆವಲಹಳ್ಳಿ ಮಾರುತಿ, ಬಾಗಲೂರು ಸುರೇಶ್ ಇನ್ನಿತರರಿದ್ದರು.
ತಹಶಿಲ್ದಾರ್ ಅವರಿಗೆ ತಮ್ಮ ಆಗ್ರಹ ಪತ್ರ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.