





ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ, ವಿಶೇಷಚೇತನರ ಗ್ರಾಮಸಭೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವತಿಯಿಂದ ತರಹುಣಸೆ ಗ್ರಾಮದ ಸ್ಟೋನ್ ಹಿಲ್ ಸರ್ಕಾರಿ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಮತ್ತು ವಿಶೇಷ ಚೇತನರ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ವಿಶೇಷ ಚೇತನರಿಗೆ ವ್ಹೀಲ್ ಚೇರ್, ಟಾಕಿಂಗ್ ಫೋನ್, ಹೊಲಿಗೆ ಯಂತ್ರ ಮತ್ತು ಸೈಕಲ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ‘ಮಕ್ಕಳು ಮತ್ತು ವಿಶೇಷ ಚೇತನರಿಗಾಗಿ ಸರ್ಕಾರ ಮೀಸಲಿಟ್ಟಿರುವ ಶೇಕಡಾ 5% ಅನುದಾನದಲ್ಲಿ ಮಕ್ಕಳ ಮತ್ತು ವಿಶೇಷ ಚೇತನರ ಗ್ರಾಮಸಭೆ ಆಯೋಜಿಸಿದ್ದು, ಗ್ರಾಮ ಸಭೆಯಲ್ಲಿ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ವಿಶೇಷ ಚೇತನರಿಗೆ ವ್ಹೀಲ್ ಚೇರ್, ಟಾಕಿಂಗ್ ಫೋನ್, ಹೊಲಿಗೆ ಯಂತ್ರ ಮತ್ತು ಶಾಲಾ ಮಕ್ಕಳಿಗಾಗಿ ಬೈಸಿಕಲ್ ವಿತರಿಸಿದ್ದೇವೆ. ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ, ವಿಶೇಷ ಚೇತನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಮತ್ತು ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅಗತ್ಯ ಸಹಕಾರ ನೀಡಿರುವುದರಿಂದ ಈ ಗ್ರಾಮಸಭೆ ಅತ್ಯಂತ ಯಶಸ್ವಿಯಾಗಿದೆ, ಈ ಸಹಕಾರ ಮತ್ತು ಬೆಂಬಲಕ್ಕಾಗಿ ಅವರೆಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತಾ ಪೂರ್ವಕ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಬಿ.ಆರ್.ಪ್ರವೀಣ್ ಮಾತನಾಡಿ ‘ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡಲು ಸರ್ಕಾರ ಪೌಷ್ಟಿಕ ಆಹಾರ, ಅಗತ್ಯ ಜಾಗೃತಿ ಸೇರಿದಂತೆ ಹಲವು ರೀತಿಯಲ್ಲಿ ಶ್ರಮಿಸುತ್ತಿದ್ದರೂ ಸಹ ನಮ್ಮಲ್ಲಿ ಅಪೌಷ್ಟಿಕತೆಯ ಕಾರಣದಿಂದಾಗಿ ವಿಶೇಷ ಚೇತನರು ಹುಟ್ಟುತ್ತಿರುವ ಬಗ್ಗೆ ವಿಷಾದವಿದೆ, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೋಷಕರು ಹೆಚ್ಚು ಗಮನ ಹರಿಸಬೇಕು. ವಿಶೇಷ ಚೇತನ ಮಕ್ಕಳು ಹುಟ್ಟದಂತೆ ತಡೆದು, ಆರೋಗ್ಯ ಪೂರ್ಣ ಮಕ್ಕಳು ಜನಿಸುವಂತೆ ನೋಡಿಕೊಳ್ಳುವಲ್ಲಿ ಇವರ ಪಾತ್ರ ಮಹತ್ವಪೂರ್ಣ ವಾದುದು, ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ಕಿವಿ ಮಾತು ಹೇಳಿದರು.
ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಮಾಜಿ ಉಪಾಧ್ಯಕ್ಷೆ ವಿಮಲಾ ಗಣೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್.ರಾಮಾಂಜಿನಿ, ಟಿ.ಎಸ್.ನವೀನ್ ಕುಮಾರ್, ರಾಮಮೂರ್ತಿ, ಎ.ಪಿ.ಮುನಿಕೃಷ್ಣ, ಅಮರ್, ರತ್ನಮ್ಮ ಆಂಜಿನಪ್ಪ, ಸಾವಿತ್ರಮ್ಮ ಮುನಿರಾಜು, ತುಳಸಮ್ಮ ವೆಂಕಟರಮಣಪ್ಪ, ಸುವರ್ಣ ಜಯಣ್ಣ, ರಮ್ಯ ವೇಣುಗೋಪಾಲ್, ಪಿಡಿಓ ಲೋಕನಾಥ್, ಕಾರ್ಯದರ್ಶಿ ಸುಬ್ರಮಣಿ, ಗಣಪತಿ ಹೆಗಡೆ, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರಿದ್ದರು.