


ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಪ್ರಶಂಸಾರ್ಹ : ಎ.ಕೆಂಪೇಗೌಡ
ಬಾಗಲೂರು ಗ್ರಾ.ಪಂ.ಯಲ್ಲಿ ಮಹಿಳಾ ಗ್ರಾಮಸಭೆ :
ಬ್ಯಾಟರಾಯನಪುರ : ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಮಹಿಳೆಯರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಬಾಗಲೂರು ಗ್ರಾ.ಪಂ. ಅಧ್ಯಕ್ಷ ಎ.ಕೆಂಪೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಬಾಗಲೂರು ಗ್ರಾ.ಪಂ. ವತಿಯಿಂದ ಗುರುವಾರ ಆಯೋಜಿಸಿದ್ದ ‘ಮಹಿಳಾ ಗ್ರಾಮಸಭೆ’ ಮತ್ತು ‘ಮಹಿಳಾ ಸಪ್ತಾಹ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಜಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ದೇಶದ ಅಪ್ರತಿಮ ಮಹಿಳಾ ಸಾಧಕಿಯರಾಗಿದ್ದಾರೆ. ಸುದೀರ್ಘ ಅಂತರಿಕ್ಷ ಯಾನ ಮುಗಿಸಿ ನಿನ್ನೆ ತಾನೆ ಧರೆಗೆ ಮರಳಿದ ಸುನಿತಾ ವಿಲಿಯಮ್ಸ್, ಬಾಹ್ಯಾಕಾಶ ಕ್ಷೇತ್ರದ ಸಾಧನೆಯ ಹಾದಿಯಲ್ಲಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಕಲ್ಪನಾ ಚಾವ್ಲಾ ಅವರ ಸಾಧನೆ ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿದೆ. ವಿಶೇಷತೆ ಎಂಬಂತೆ ನಮ್ಮದೇ ವ್ಯಾಪ್ತಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಓ ಲತಾಕುಮಾರಿ ಸಹ ಓರ್ವ ಸಾಧಕ ಮಹಿಳೆಯಾಗಿದ್ದು, ಅತ್ಯುತ್ತಮ ಕಾರ್ಯವೈಖರಿ, ಜನಸ್ಪಂದನೆಯ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಬಾಗಲೂರು ಗ್ರಾಮದಲ್ಲಿ ಎನ್.ಎಂ.ಆರ್.ಎಲ್. ಭವನ(ಮಹಿಳಾ ಭವನ) ನಿರ್ಮಾಣಕ್ಕೆ 16 ಲಕ್ಷ ರು.ಗಳ ಅನುದಾನ ನೀಡಿ ಸಹಕರಿಸಿರುವ ಅವರ ನೆರವನ್ನು ಮಹಿಳಾ ಗ್ರಾಮಸಭೆಯ ಈ ಶುಭ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.
ಮಹಿಳಾ ಗ್ರಾಮಸಭೆಯಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಡಿ.ಜಗನ್ನಾಥ್, ಪದ್ಮಾವತಿ ವೆಂಕಟರಾಜು, ಗ್ರಾ.ಪಂ. ಉಪಾಧ್ಯಕ್ಷೆ ರಫೀಯಾ ಸುಲ್ತಾನ್ ದಸ್ತಗಿರಿ, ಬಾಗಲೂರು ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಎ.ವೆಂಕಟರಾಜು, ಗ್ರಾ.ಪಂ.ಸದಸ್ಯ ರಾದ ವೀಣಾ ಶಿವಣ್ಣ, ನಾಗವೇಣಿ ಪಿಳ್ಳೇಗೌಡ, ಲಕ್ಷ್ಮಮ್ಮ ಗಂಗಾಧರ್, ಹೇಮಲತಾ ಅನಿಲ್ ಕುಮಾರ್, ಆಂಜಿನಮ್ಮ ಸಲ್ಲಪ್ಪ, ಖುತೇಜಾ ನೂರುಲ್ಲಾ, ಪರ್ವಿನ್ ತಾಜ್ ಬಾಬಾಜಾನ್, ಹಮೀದಾ ಫಕೃದ್ದೀನ್, ಫರ್ಜಾನಾ ಅಹಮದ್, ಬಿ.ಸಿ.ನಾಗರಾಜ್, ಪ್ರಭುಸ್ವಾಮಿ, ಸೈಯದ್ ಶಬ್ಬೀರ್, ಬಿ.ಎಸ್. ಸುಧೀಂದ್ರ, ಧನಂಜಯ, ಸಂತೋಷ್ ಕುಮಾರ್, ಜಬಿವುಲ್ಲಾ ಖಾನ್, ಮಹಮದ್ ಉಸ್ಮಾನ್ ಘನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದು, ಇಲಾಖೆಗಳಲ್ಲಿ ಮಹಿಳೆಯರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.