ನೂತನ ಪದಾಧಿಕಾರಿಗಳ ಪರಿಚಯ ಪದಗ್ರಹಣ ಸಮಾಗಮ ಕಾರ್ಯಕ್ರಮ :

ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಆಯೋಜನೆ :

ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ವಾರ್ಡ್ ವ್ಯಾಪ್ತಿಯ ಖಾಸಗಿ ಹೋಟೆಲ್ ನಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪರಿಚಯ, ಪದಗ್ರಹಣ, ಸಮಾಗಮ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಎಸ್ಸಿ ಮೋರ್ಚಾ ನೂತನ ಪದಾಧಿಕಾರಿಗಳಿಗೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ, ಪಕ್ಷದ ಬಲವರ್ಧನೆ, ಸಶಕ್ತ ಭಾರತ ನಿರ್ಮಾಣ ಕುರಿತು ಹಲವು ವಿಚಾರಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಶಾಸಕರು ಎಸ್ಸಿ ಮೋರ್ಚಾ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ‘ಬಿಜೆಪಿ ಪಕ್ಷ ಸಶಕ್ತ ಭಾರತ ನಿರ್ಮಾಣದ ಕನಸಿನೊಂದಿಗೆ ಉದಯವಾದ ಪಕ್ಷವಾಗಿದ್ದು, ಇಲ್ಲಿ ಜಾತಿ, ಮತ, ಪಂಥಗಳ ಬೇಧವಿಲ್ಲ, ಸಶಕ್ತ ಭಾರತ ನಿರ್ಮಾಣ ಮತ್ತು ಹಿಂದುತ್ವ ಬಿಜೆಪಿ ಪಕ್ಷದ ಪ್ರಮುಖ ಧ್ಯೇಯವಾಗಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಂತರ ದೇಶದ ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ವರ್ಗಗಳ ಜನತೆಯನ್ನು ಮತಕ್ಕಾಗಿ ಬಳಸಿಕೊಂಡಿದ್ದೇ ಹೆಚ್ಚು, ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಿಸಿದ ಯಾವುದಾದರೂ ಒಂದು ಪಕ್ಷ ದೇಶದಲ್ಲಿ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಆದರೆ ಚುನಾವಣಾ ಸಮಯದಲ್ಲಿ ಮಾತ್ರ ಕಾಂಗ್ರೆಸಿಗರಿಗೆ ಅಂಬೇಡ್ಕರ್ ಅವರ ನೆನಪಾಗುತ್ತದೆ. ಮತ ರಾಜಕಾರಣದ ದುರುದ್ದೇಶಕ್ಕೆ ಮಾತ್ರ ಕಾಂಗ್ರೆಸಿಗರಿಗೆ ಅಂಬೇಡ್ಕರ್ ನೆನಪಾಗುತ್ತಾರೆಯೇ ಹೊರತು ನಿಜವಾದ ಗೌರವಕ್ಕಾಗಿ ಅಲ್ಲ. ಇದನ್ನು ದೇಶದ ದಲಿತ ಮತ್ತು ಹಿಂದುಳಿದ ವರ್ಗಗಳ ಜನತೆ ಮನಗಾಣಬೇಕಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಕಳೆದ ಹದಿನೈದು ವರ್ಷಗಳಲ್ಲಿ ಅಂಬೇಡ್ಕರ್ ಅವರ ಸ್ಮಾರಕಗಳ ಅಭಿವೃದ್ಧಿ, ಅವರ ಸ್ಥಳಗಳ ಸಂರಕ್ಷಣೆಯಂತಹ ಹಲವು ಕಾರ್ಯಗಳನ್ನು ಕೈಗೊಂಡು, ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದ್ದಾರೆ ಇದನ್ನು ನಮ್ಮ ಜನತೆ ಸ್ಮರಿಸಬೇಕಿದೆ ಎಂದರು.

ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಶ್ರೀನಿವಾಸಯ್ಯ ಮಾತನಾಡಿ ‘ದಲಿತ ಸಮುದಾಯದ ನಮ್ಮ ಬಂಧುಗಳು ಅಂಬೇಡ್ಕರ್ ಅವರ ವಿಚಾರ ಧಾರೆಗಳ ಜೊತೆಗೆ ಬಿಜೆಪಿ ಪಕ್ಷ ಅಂಬೇಡ್ಕರ್ ಅವರನ್ನು ಗೌರವಿಸುವ ದಿಸೆಯಲ್ಲಿ ಕೈಗೊಂಡಿರುವ ಹಲವು ಮಹತ್ವದ ವಿಷಯಗಳ ಕುರಿತು ತಿಳಿದುಕೊಳ್ಳಬೇಕು. ಬಿಜೆಪಿ ಪಕ್ಷವನ್ನು ಯಲಹಂಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚೆ ಸಶಕ್ತ ಮತ್ತು ಸದೃಢಗೊಳಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಯಲಹಂಕ ಗ್ರಾ.ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಗ್ರಾಮಾಂತರ ಮಂಡಲ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್, ಯಲಹಂಕ ಗ್ರಾ.ಮಂಡಲ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಖಜಾಂಚಿ ಮುನಿಕೃಷ್ಣ, ಯಲಹಂಕ ಕ್ಷೇತ್ರ ಬಿಜೆಪಿ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ, ಹೆಸರಘಟ್ಟ ಹೋಬಳಿ ಎಸ್ಸಿ ಮೋರ್ಚಾ ಅಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲೇಶ್, ಗಂಟಿಗಾನಹಳ್ಳಿ ನಾಗೇಶ್, ಕಾರ್ಯದರ್ಶಿ ಮಾದಪ್ಪನಹಳ್ಳಿ ರಾಜಶೇಖರ್, ದಾಸನಪುರ ಹೋಬಳಿ ಎಸ್ಸಿ ಮೋರ್ಚಾ ಅಧ್ಯಕ್ಷ ಗಂಗಾಧರಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಜು, ಮಂಜುನಾಥ್, ಬಿಜೆಪಿ ಮುಖಂಡರಾದ ಶಿವಾನಂದ, ಎಸ್ ಜಿ ಪ್ರಶಾಂತ್ ರೆಡ್ಡಿ, ರಾಮಚಂದ್ರರೆಡ್ಡಿ, ಸೇರಿದಂತೆ ಎಸ್ಸಿ ಮೋರ್ಚಾ ಪದಾಧಿಕಾರಿಗಳಿದ್ದರು.

Leave a Reply

Your email address will not be published. Required fields are marked *