

ದೇಶದ ಮೊದಲ ಸೋಲಾರ್ ಪವರ್ ಪಂಪ್ ಗೆ ಅರಕೆರೆ ಗ್ರಾ.ಪಂ.ಯಲ್ಲಿ ಚಾಲನೆ :
ಯಲಹಂಕ : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿದ್ಯುತ್ ವೆಚ್ಚ, ಸಮಯ ಮತ್ತು ಪರಿಶ್ರಮವನ್ನು ಕಡಿಮೆ ಮಾಡಬಲ್ಲ ದೇಶದಲ್ಲೇ ಪ್ರಥಮ ಸ್ವಯಂಚಾಲಿತ ಸೋಲಾರ್ ಪವರ್ ಪಂಪ್ ಗೆ ಶಾಸಕ ಎಸ್ ಆರ್ ವಿಶ್ವನಾಥ್ ಕ್ಷೇತ್ರದ ಅರಕೆರೆ ಗ್ರಾ.ಪಂ.ಯಲ್ಲಿ ಸೋಮವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನೀರು ಸರಬರಾಜು ಮಾಡಲು ಸೋಲಾರ್ ಪವರ್ ಪಂಪ್ ಅಳವಡಿಸಿರುವ ಮಾದರಿ ಯೋಜನೆಗೆ ಅರಕೆರೆ ಗ್ರಾ.ಪಂ. ಭಾಜನವಾಗಿದ್ದು, ಇದರಿಂದ ಪ್ರತಿನಿತ್ಯ ನೀರು ಸರಬರಾಜಿಗಾಗಿ ಗ್ರಾಮ ಪಂಚಾಯಿತಿಗೆ ತಗಲುತ್ತಿದ್ದ ಸುಮಾರು 8 ಸಾವಿರ ರು. ವಿದ್ಯುತ್ ವೆಚ್ಚ ಉಳಿತಾಯವಾಗುವುದರ ಜೊತೆಗೆ ಸಮಯ ಮತ್ತು ಪರಿಶ್ರಮ ಸಹ ಉಳಿತಾಯವಾಗಲಿದೆ. ಕೇವಲ ಒಂದು ಗಂಟೆ ಸೋಲಾರ್ ನಿಂದ ಚಾರ್ಜ್ ಆದರೆ ದಿನಪೂರ್ತಿ ಮೋಟರ್ ಚಾಲನೆ ಮಾಡುವಷ್ಟು ವಿದ್ಯುತ್ ದೊರೆಯಲಿದ್ದು, ನೀರನ್ನು ಮೇಲೆತ್ತಲು ಮತ್ತು ಗ್ರಾಮಕ್ಕೆ ಸರಬರಾಜು ಮಾಡಲು ಹೆಚ್ಚು ಸಹಕಾರಿಯಾಗಲಿದೆ. ಅಕ್ವಾಶೈನ್ ಟೆಕ್ನಾಲಜೀಸ್ ಫ್ರೈ.ಲಿ.ಸಂಸ್ಥೆ ಯಿಂದ ವಿನೂತನವಾಗಿ ತಯಾರಿಸಿರುವ ಈ ಸೋಲಾರ್ ಪವರ್ ಪಂಪ್ ಪೂರ್ಣ ಪ್ರಮಾಣದ ಸೆನ್ಸಾರ್ ಹೊಂದಿರುವ ಸ್ವಯಂಚಾಲಿತ ಪಂಪ್ ಸೆಟ್ ಆಗಿದ್ದು, 1 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಲ್ಲಿ ಒಂದೆರಡು ಸಾವಿರ ಲೀಟರ್ ನೀರು ಕಡಿಮೆಯಾದರೂ ಸಹ ಸ್ವಯಂಚಾಲನೆ ಆಗುವುದರಿಂದ ಗ್ರಾಮಕ್ಕೆ ನೀರಿನ ಅಭಾವವಾಗುವ ಪ್ರಮೇಯವೇ ಬರುವುದಿಲ್ಲ, ಅಲ್ಲದೆ ಟ್ಯಾಂಕ್ ನಲ್ಲಿರುವ ನೀರಿನ ಪ್ರಮಾಣ, ಮೋಟರ್ ಮೂಲಕ ಟ್ಯಾಂಕ್ ಒಳಗೆ ಬರುತ್ತಿರುವ ಮತ್ತು ಹೊರ ಹೋಗುತ್ತಿರುವ ನೀರಿನ ಪ್ರಮಾಣ ನಿಖರವಾಗಿ ತಿಳಿಯುವಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು ನೀರು ಮತ್ತು ವಿದ್ಯುತ್ ನ ಅಪವ್ಯಯವನ್ನು ತಪ್ಪಿಸಲು ಹೆಚ್ಚು ಸಹಕಾರಿಯಾಗುತ್ತದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಜಲಜೀವನ್ ಮಿಷನ್, ಅಕ್ವಾಶೈನ್ ಪ್ರೈ.ಲಿ., ಅಮೇರಿಕ ಮೂಲದ ಎನ್ ಜಿ ಓ ಸಂಸ್ಥೆಯ ಸಹಯೋಗದೊಂದಿಗೆ ಸಿಎಸ್ಆರ್ ನಿಧಿಯ ಅಡಿಯಲ್ಲಿ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿ ರುವ ದೇಶದ ಮೊದಲ ಮಾದರಿ ಪ್ಲಾಂಟ್ ಇದಾಗಿದ್ದು, 1 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ತುಂಬಲು ಈ ಮೊದಲು 8 ಗಂಟೆಗಳ ಸಮಯ ಬೇಕಾಗುತ್ತಿತ್ತು ಆದರೆ ಸೋಲಾರ್ ಪವರ್ ಪಂಪ್ ಇದನ್ನು ಕೇವಲ 3 ಗಂಟೆಗಳಿಗೆ ಇಳಿಸಿದೆ ಇದೊಂದು ಶ್ಲಾಘನೀಯ ಕಾರ್ಯವಾಗಿದ್ದು, ಇಲ್ಲಿನ ಯಶಸ್ಸನ್ನು ಗಮನಿಸಿ ದೇಶದ ಇತರ ಕಡೆಗಳಿಗೆ ವಿಸ್ತರಿಸುವ ಗುರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊಂದಿದೆ, ಇಂತಹ ದೇಶದಲ್ಲೇ ವಿನೂತನವಾದ ಯೋಜನೆ ಯೊಂದು ಯಲಹಂಕ ಕ್ಷೇತ್ರದಿಂದ ಚಾಲನೆಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಅರಕೆರೆ ಗ್ರಾ.ಪಂ.ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಎಸ್ ಎಲ್ ಎನ್ ಗೌಡ, ಮುನಿಲಕ್ಷ್ಮಮ್ಮ, ಕೆ.ಎಂ.ಅರಸೇಗೌಡ, ಶಿಲ್ಪಾರಾಜಣ್ಣ, ಆಂಜಿನಮ್ಮ, ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ವಸಂತ್ ಅರಕೆರೆ, ತಾಪಂ ಮಾಜಿ ಅಧ್ಯಕ್ಷ ಮುನಿದಾಸಪ್ಪ, ಎಸ್ ಎಲ್ ಎನ್ ಗೌಡ, ಬಿ.ಸಿ.ಶಶಿಕುಮಾರ್, ಪವನ್, ಭಾಗ್ಯಮ್ಮ ಈಶ್ವರಾಚಾರ್, ಮುನಿಲಕ್ಷ್ಮಮ್ಮ, ಕೆ.ಎಂ.ಅರಸೇಗೌಡ, ನೇತ್ರಾವತಿ ಅಂಬರೀಶ್ ಬಾಬು, ಶಿಲ್ಪಾರಾಜಣ್ಣ, ಪದ್ಮ ಮುನಿಕೃಷ್ಣ, ಮುನಿಲಕ್ಷ್ಮಮ್ಮ, ಮಂಜುಳ, ಚಿಕ್ಕಮಿನಿಯಪ್ಪ, ಮಂಜುಳ ಜಿ.,ರಾಮೆಲ್ಲಪ್ಪ, ಚನ್ನಪ್ಪ, ಶಾಂತಮ್ಮ, ಗಾಯತ್ರಿ, ಪಿಡಿಓ ತಿಮ್ಮಯ್ಯ ಸೇರಿದಂತೆ ಗ್ರಾ.ಪಂ.ಸಿಬ್ಬಂದಿಗಳಿದ್ದರು.