










ಇ ಖಾತಾ ಮೇಳ ಒಂದು ಐತಿಹಾಸಿಕ ಕಾರ್ಯಕ್ರಮ : ಡಿ.ಕೆ.ಶಿವಕುಮಾರ್ ಶ್ಲಾಘನೆ
ಬ್ಯಾಟರಾಯನಪುರ ಕ್ಷೇತ್ರದ ಸಹಕಾರನಗರದಲ್ಲಿ ಬೃಹತ್ ಇ ಖಾತಾ ಮೇಳ :
ಬ್ಯಾಟರಾಯನಪುರ : ಕಂದಾಯ ಇಲಾಖೆಯ ಇತಿಹಾಸದಲ್ಲಿ ಇ ಖಾತಾ ಮೇಳ ಒಂದು ಮಹತ್ವದ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸರ್ಕಾರ ಜನರ ಮನೆ ಬಾಗಿಲಿಗೆ ತೆರಳಿ ಅವರ ಸ್ವತ್ತುಗಳಿಗೆ ಇ ಖಾತಾ ಮಾಡಿಸಿಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ಕ್ಷೇತ್ರದ ಸಹಕಾರನಗರದಲ್ಲಿ ಆಯೋಜಿಸಿದ್ದ ಬೃಹತ್ ಇ ಖಾತಾ ಮೇಳದಲ್ಲಿ ಆರ್ಹ ಫಲಾನುಭವಿಗಳಿಗೆ ಇ ಖಾತಾ ಪತ್ರ ವಿತರಿಸಿ ಮಾತನಾಡಿದ ಅವರು ‘ನಾವೆಂದಿಗೂ ಮತಕ್ಕೋಸ್ಕ ರಾಜಕಾರಣ ಮಾಡಿಲ್ಲ, ಜನರ ಹಿತ, ಬದುಕು ಮತ್ತು ಅವರ ಆಸ್ತಿಗಳ ರಕ್ಷಣೆಗಾಗಿ ಗ್ಯಾರೆಂಟಿ ಸರ್ಕಾರ ಜಾರಿಗೆ ತಂದಿದ್ದೇವೆ. ಜನಹಿತಕ್ಕಾಗಿ ಕಾಂಗ್ರೆಸ್ ಸರ್ಕಾರ ಬಗರ್ ಹುಕುಂ ಯೋಜನೆ ಮೂಲಕ ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿ, ಭೂ ಮಂಜೂರಾತಿ ಮಾಡಿಕೊಟ್ಟಿದ್ದೇವೆ. ಎ ಖಾತಾ ಇಲ್ಲದವರಿಗೆ ಬಿ ಖಾತಾ ಮಾಡಿಕೊಟ್ಟಿದ್ದೇವೆ. ಎಸ್.ಎಂ.ಕೃಷ್ಣ ಅವಧಿಯಲ್ಲಿ ಅಕ್ರಮ ಸಕ್ರಮ ಯೋಜನೆ ಮೂಲಕ ಜನರ ಆಸ್ತಗಳನ್ನು ರಕ್ಷಿಸಲಾಗಿದೆ. ಕೇವಲ ಐದು ರು.ಗಳಿಗೆ ಭೂಮಿ ಹೆಸರಲ್ಲಿ ಖಾತೆ ಮಾಡಿಕೊಟ್ಟಿದ್ದೇವೆ.
ಇ ಖಾತಾ ವಿಷಯದಲ್ಲಿ ಕರ್ನಾಟಕ ದೇಶದ ಗಮನ ಸೆಳೆದಿದೆ. ನಿಮ್ಮ ಆಸ್ತಿಗಳು ಸರಿಯಾದ ರೀತಿಯಲ್ಲಿ ನಿಮಗೆ ದೊರಕಿಸಿ ಕೊಡುವ ದಿಸೆಯಲ್ಲಿ ಕಳೆದ ಒಂದು ವರ್ಷದಿಂದ ನಿಮ್ಮ ಆಸ್ತಿ ಮತ್ತು ಫೋಟೋಗಳನ್ನು ಸ್ಕ್ಯಾನ್ ಮಾಡಿ ಇಡಲಾಗಿದೆ.ಜನತೆಯ ಆಸ್ತಿಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ, ಯಾವುದೇ ರೀತಿಯ ಲಂಚಕ್ಕೆ ಆಸ್ಪದ ನೀಡದೆ ಖಾತೆಗಳನ್ನು ನೀಡಬೇಕೆಂಬ ಹಂಬಲದೊಂದಿಗೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ ಹಲವು ತಿಂಗಳಿನಿಂದ ಪ್ರತಿ ವಾರ್ಡ್, ಪ್ರತಿ ಗ್ರಾಮಗಳಲ್ಲಿ ಇ ಖಾತಾ ಅಭಿಯಾನವನ್ನು ಪ್ರಾಮಾಣಿಕವಾಗಿ ಕೈಗೊಂಡು, ಜನರ ಮನೆ ಬಾಗಿಲಿಗೆ ತೆರಳಿ ಇ ಖಾತಾ ಮಾಡಿಸಿಕೊಟ್ಟಿರುವುದು ಸ್ತುತ್ಯಾರ್ಹ ಕಾರ್ಯವಾಗಿದ್ದು, ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು ಸಹಕರಿಸಿ ಯಶಸ್ವಿಗೊಳಿಸಿರುವ ಕೆಬಿಜಿ ಸ್ವಯಂಸೇವಕರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಲಿಚ್ಛಿಸುತ್ತೇನೆ.
ರಾಜ್ಯದ ಜನತೆಗೆ ಉಚಿತವಾಗಿ ಇ ಖಾತಾ ಮಾಡಿಸಿಕೊಡಬೇಕು ಎಂಬುದು ನನ್ನ ದೂರಾಲೋಚನೆ ಯಾಗಿದ್ದು, ಈ ಕಾರ್ಯಕ್ಕೆ ಸಚಿವ ಕೃಷ್ಣಬೈರೇಗೌಡ ಅವರು ಬೆಂಬಲವಾಗಿ ನಿಂತು, ತಾಂಡಾಗಳು, ಹಟ್ಟಿಗಳು, ಹಾಡಿಗಳಂಥ ಧಾಖಲೆಗಳೇ ಇಲ್ಲದ ಪ್ರದೇಶಗಳಲ್ಲೂ ಸಹ ಪ.ಜಾತ, ಪಂಗಡ, ಹಿಂದುಳಿದ ವರ್ಗದ ಜನತೆ ಸೇರಿದಂತೆ ಎಲ್ಲರಿಗೂ ಇ ಖಾತಾ ಅಭಿಯಾನದ ಅಡಿಯಲ್ಲಿ ಖಾತೆ ಮಾಡಿಸಿಕೊಡುತ್ತಿರುವುದು ಶ್ಲಾಘನೀಯ ಸಂಗತಿ.
ರಾಜ್ಯದಲ್ಲಿ ಇದುವರೆಗೂ 1,11,11000 ಜನರಿಗೆ ಈಗಾಗಲೇ ಅವರ ಆಸ್ತಿಗಳು ಮತ್ತು ಅವರ ಫೋಟೋ ತೆಗೆದು ಇ ಖಾತಾ ನೀಡಲಾಗಿದೆ. ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ಆಸ್ತಿಗಳಿದ್ದು, ಇವುಗಳಿಗೆ ಉಚಿತವಾಗಿ ಖಾತೆ ಮಾಡಿಸಿಕೊಡಲು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು, ಬೆಂಗಳೂರು ನಗರದ ಎಲ್ಲಾ ಆಸ್ತಿಗಳಿಗೂ ಖಾತೆ ಮಾಡಿ ಕೊಡುವ ಮೂಲಕ ಜನತೆಯನ್ನು ಅವರ ಆಸ್ತಿಗಳ ವಿಷಯದಲ್ಲಿ ನೆಮ್ಮದಿಯಿಂದ ಇಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ಎಲ್ಲಾ ಆಸ್ತಿಗಳ ಇ ಖಾತೆಯನ್ನು ನಮ್ಮ ಅಧಿಕಾರಿಗಳನ್ನು ಜನತೆಯ ಮನೆ ಬಾಗಿಲಿಗೆ ಕಳಿಸುವ ಮೂಲಕ ಉಚಿತವಾಗಿ ಮೂಡಿಸಿಕೊಡ ಲಾಗುವುದು. ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದ್ದು, ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಆಸ್ತಿಗಳನ್ನು ರಕ್ಷಣೆ ಮಾಡಿ ಕೊಡುವ ಮಹತ್ವದ ಕಾರ್ಯ ಕೈಗೊಂಡಿದೆ.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈಗಾಗಲೇ 50 ಸಾವಿರ ಖಾತೆಗಳನ್ನು ಉಚಿತವಾಗಿ ಜನರ ಮನೆ ಬಾಗಿಲಿಗೆ ತೆರಳಿ ಮಾಡಿಸಿಕೊಡುವ ಮೂಲಕ ನಗರದಲ್ಲೇ ಅತಿ ಹೆಚ್ಚು ಇ ಖಾತೆಗಳನ್ನು ಮಾಡಿಕೊಟ್ಟಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಬ್ಯಾಟರಾಯನಪುರ ಪಾತ್ರವಾಗಿದೆ. ಇಲ್ಲಿನ ಯಶಸ್ಸನ್ನು ಮನಗಂಡು ನಗರದ ಎಲ್ಲಾ ಕ್ಷೇತ್ರಗಳಿಗೂ ಇ ಖಾತಾ ಅಭಿಯಾನ ವಿಸ್ತರಿಸಲಾಗುವುದು ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ ‘ಇ ಖಾತಾ ವಿಷಯದಲ್ಲಿ ಕರ್ನಾಟಕದ ಇ ಖಾತಾ ದೇಶದಲ್ಲೇ ಗೋಲ್ಡ್ ಸ್ಟ್ಯಾಂಡರ್ಡ್ ಎಂಬ ಹೆಗ್ಗಳಿಕೆ ಹೊಂದಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿರುವುದು ಸಂತೋಷದ ಸಂಗತಿ. ಜನರ ಆಸ್ತಿಗಳು ವಂಚನೆಗೆ ಒಳಗಾಗದೆ, ಮಧ್ಯವರ್ತಿಗಳ ಹಾವಳಿಯಿಂದ ದೂರ ಉಳಿದು, ಲಂಚ, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡದೆ ಅವರ ಕೈ ಸೇರಬೇಕು ಎಂಬ ಮಹತ್ವದ ಉದ್ದೇಶದಿಂದ ಇ ಖಾತಾ ಅಭಿಯಾನದ ಮೂಲಕ ಜನರ ಆಸ್ತಿಗಳಿಗೆ ಉಚಿತವಾಗಿ ಇ ಖಾತಾ ಮಾಡಿಸಿಕೊಡಲಾಗಿದೆ. ಇದವರೆಗೂ ಬ್ಯಾಟರಾಯನಪುರ ಕ್ಷೇತ್ರದಲ್ಲಿ 50 ಸಾವಿರ ಇ ಖಾತಾ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಇ ಖಾತಾ ಅಭಿಯಾನದ ಮೂಲಕ ಇನ್ನೂ ಹೆಚ್ಚಿನ ಇ ಖಾತೆಗಳನ್ನು ಮಾಡಿಸಿಕೊಡುವ ಕ್ಷೇತ್ರದ ಜನರ ಆಸ್ತಿಗಳನ್ನು ಸಂರಕ್ಷಿಸಲು ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳಾದ ಮುನೀಶ್ ಮೌದ್ಗಿಲ್, ಮಹೇಶ್ವರ ರಾವ್, ಯಲಹಂಕ ವಲಯ ಆಯುಕ್ತ ಕರಿಗೌಡ, ಮಾಜಿ ಉಪ ಮಹಾಪೌರರಾದ ಆನಂದ್, ಇಂದಿರಾ, ಕಾಂಗ್ರೆಸ್ ಮುಖಂಡರಾದ ಹನುಮಂತೇಗೌಡ, ದಾನೇಗೌಡ, ಕೆ.ಅಶೋಕನ್, ಎನ್.ಎನ್.ಶ್ರೀನಿವಾಸಯ್ಯ, ಜಯಗೋಪಾಲ್ ಗೌಡ, ಎನ್.ಕೆ.ಮಹೇಶ್ ಕುಮಾರ್, ಪಾರ್ಥಿಬರಾಜನ್, ರವಿಕುಮಾರ್, ರವಿಗೌಡ, ಶಾಂತಮ್ಮ, ಶುಕೂರ್ ಅಹಮದ್, ಚೇತನ್, ಮಂಜುನಾಥ್ ಬಾಬು, ಎಚ್.ಎ.ಶಿವಕುಮಾರ್, ಆರ್.ಎಂ.ಶ್ರೀನಿವಾಸ್, ಹನುಮಂತಿ, ರವಿಶಂಕರ್ ಗೌಡ, ಮೈಲನಹಳ್ಳಿ ರಾಜಕುಮಾರ್, ಮಾರೇನಹಳ್ಳಿ ನಾಗರಾಜ್, ನಂಜೇಗೌಡ, ರಾಹುಲ್ ಸೇರಿದಂತೆ ಕೆಬಿಜಿ ಸ್ವಯಂ ಸೇವಕರು ಹಾಗೂ ಹಲವು ಗಣ್ಯರಿದ್ದರು.