

















ಯಲಹಂಕ ತಾಲ್ಲೂಕು ಆಡಳಿತದಿಂದ 70ನೇ ಕನ್ನಡ ರಾಜ್ಯೋತ್ಸವ :
ಯಲಹಂಕ : ಯಾರು ಎಷ್ಟೇ ಆಕ್ರಮಣ ಆಕ್ರಮಣ ಮಾಡಿದರು ಸಹ ನಾವು ನಮ್ಮತನವನ್ನು ಬಿಟ್ಟು ಕೊಡದೆ ಬಿಗಿಯಾಗಿದ್ದರೆ ಇಲ್ಲಿಗೆ ವಲಸೆ ಬಂದವರು ಸಹ ನಮ್ಮ ಭಾಷೆ, ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಾರೆ, ಇದನ್ನು ಎಚ್ಚರಿಸುವ ಕೆಲಸ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಕನ್ನಡಿಗರಾದ ನಾವು ವರ್ಷಪೂರ್ತಿ ಜಾಗೃತರಾಗಿರಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಯಲಹಂಕ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಭಾರತೀಯರ ಮತ್ತು ಕನ್ನಡಿಗರ ಹೃದಯ ವೈಶಾಲ್ಯತೆ ಹೆಚ್ಚಾಗಿರುವ ಪರಿಣಾಮ ದೇಶ ಮತ್ತು ರಾಜ್ಯಕ್ಕೆ ಆಪತ್ತು ಎದುರಾಗುವ ದಿನಗಳು ದೂರವಿಲ್ಲ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ನಿಧಾನವಾಗಿ ನಡೆಯುತ್ತಿರುವ ಆಕ್ರಮಣಗಳಿಗೆ ಕನ್ನಡಿಗರಾದ ನಾವೇ ಕಾರಣರಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಹೃದಯ ವೈಶಾಲ್ಯತೆಯ ಜೊತೆಗೆ ಜಾಗೃತಿ ಸಹ ನಮ್ಮ ಆಧ್ಯತೆಯಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಯಲಹಂಕ ತಹಸೀಲ್ದಾರ್ ಶ್ರೇಯಸ್ ಜಿ.ಎಸ್., ತಾ.ಪಂ.ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಜೋಸೆಫ್ ಎ., ಮಧು ಎಲ್., ಬೆಂ.ಉತ್ತರ ನಗರ ಪಾಲಿಕೆಯ ಯಲಹಂಕ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಸುಧಾಕರ್ ರೆಡ್ಡಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಮಸಂಜೀವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶೈಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಮೆರವಣಿಗೆ : ಕಾರ್ಯಕ್ರಮಕ್ಕೂ ಮುನ್ನ ಬಿಡಿಕೆ ವೃತ್ತದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಅಲಂಕೃತಗೊಂಡಿದ್ದ ಸಾರೋಟಿನಲ್ಲಿ ಪ್ರತಿಷ್ಠಾಪಿಸಿ, ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಮಿನಿ ವಿಧಾನ ಸೌಧದ ವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಜನ ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka Bangalore Karnataka
9845085793
7349337989
