ವಿವಿ ಪುರಂ ನ ತಿಂಡಿ ಬೀದಿ(ಫುಡ್ ಸ್ಟ್ರೀಟ್) ಅಭಿವೃದ್ಧಿ ಕಾಮಗಾರಿ ಪರಿಶೀಲನೆ:
ನಗರದ ವಿ.ವಿ ಪುರಂನಲ್ಲಿರುವ ತಿಂಡಿ ಬೀದಿಯನ್ನು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 2023ರ ಆಗಸ್ಟ್ ತಿಂಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದೆಂದು ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ತಿಳಿಸಿದರು.
ವಿವಿ ಪುರಂ ತಿಂಡಿ ಬೀದಿಯನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 200 ಮೀಟರ್ ಉದ್ದದ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದೆಂದು ಹೇಳಿದರು.
ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು: ಶಾಸಕರು.
ವಿ.ವಿ. ಪುರಂ ತಿಂಡಿಬೀದಿಯಲ್ಲಿ ಎಲ್ಲಾ ವ್ಯಾಪಾರಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಥಳದಲ್ಲಿದ್ದ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಂಡು ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಒಂದು ತಿಂಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ನವೀಕರಣಗೊಂಡು ತಿಂಡಿ ಬೀದಿಯನ್ನು ಉದ್ಘಾಟನೆಗೊಳಿಸಲಾಗುವುದು ಎಂದು ಮಾನ್ಯ ಸ್ಥಳೀಯ ಶಾಸಕರಾದ ಶ್ರೀ ಉದಯ್ ಬಿ. ಗರುಡಾ ಚಾರ್ ರವರು ತಿಳಿಸಿದರು.
ಪ್ರಸ್ತುತ ಕಾಮಗಾರಿಯ ಸ್ಥಿತಿಗತಿ:
ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆನೀರುಗಾಲುವೆ ಸಂಪರ್ಕ, ಕೇಬಲ್ಗಳ ಲೈನ್ ಡಕ್ಟ್ ಹಾಗೂ ಕೇಬಲ್ ಚೇಂಬರ್ಗೆ ಸಂಬಂಧಿಸಿದ ಕಾಮಗಾರಿ ಮುಕ್ತಾಯಗೊಂಡಿರುತ್ತದೆ.
ರಸ್ತೆಗೆ ಅನುಗುಣವಾಗಿ ಬೆಡ್ ಕಾಂಕ್ರಿಟ್ ಹಾಕಲಾಗಿದೆ.
ಬಾಕಿ ಕಾಮಗಾರಿಯ ವಿವರ:
ಕ್ಯಾರೇಜ್ ವೇಯಲ್ಲಿ ವರ್ಣರಂಜಿತ ಬಣ್ಣದ ಕಾಂಕ್ರೀಟ್ ರಸ್ತೆ ನಿರ್ಮಾಣ.
ಕರ್ಬ್ ಸ್ಟೋನ್ ಗಳ ಅಳವಡಿಕೆ.
ಪಾದಚಾರಿ ಮಾರ್ಗ ನಿರ್ಮಾಣ.
ಎಚ್ಡಿಡಿ ಕೇಬಲ್ಗಳೊಂದಿಗೆ ಬೀದಿ ದೀಪದ ಕಂಬಗಳ ಅಳವಡಿಕೆ.
ಎಲ್ಲಾ ಅಂಗಡಿಗಳಿಗೆ ಕೆನೋಪಿಗಳ ಅಳವಡಿಕೆ.
ಪ್ರವೇಶ ಪ್ಲಾಜಾ.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ಸುತ್ತಮುತ್ತ ಸುಂದರೀಕರಣಗೊಳಿಸುವುದು.
ಈ ವೇಳೆ ವಲಯ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಮಹಂತೇಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ:
ಶ್ರೀ ಮಹಂತೇಶ್, ಕಾರ್ಯಪಾಲಕ ಅಭಿಯಂತರರು, ಚಿಕ್ಕಪೇಟೆ, ಬಿಬಿಎಂಪಿ.
ಮೊ.ಸಂ: 9008894289