ಹಿಂದುಳಿದ ಜನಾಂಗದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಿವಂಗತ ಎಲ್ ಜಿ ಹಾವನೂರವರ ಕೊಡುಗೆ ಅಪಾರವಾದದ್ದು, ಎಲ್ ಜಿ ಹಾವನೂರುರವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ಕಾನೂನು ಮಂತ್ರಿಯಾಗಿ, ತುಳಿತಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದವರಲ್ಲಿ ಕರ್ನಾಟಕಕ್ಕೆ ಮೊದಲನೆಯ ವ್ಯಕ್ತಿಯಾಗಿ ನಿಲ್ಲುತ್ತಾರೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ,, ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ ಅಭಿಪ್ರಾಯ ಪಟ್ಟರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ “ಎಲ್ ಜಿ ಹಾವನೂರವರ ಸಾಮಾಜಿಕ ಬದಲಾವಣೆಯ ಕನಸುಗಳು” ಎಂಬ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ ಜಿ ಹಾವನೂರ್ ಮತ್ತು ಡಿ ದೇವರಾಜ ಅರಸ್ ರವರು ಕರ್ನಾಟಕ ಕಂಡ ಸಾಮಾಜಿಕ ಬದಲಾವಣೆ ಹರಿಕಾರರು. ಸಮಾಜದ ಎಲ್ಲಾ ಜನಾಂಗಗಳ ಬಡವರ ಹೇಳಿಗೆ ಗಾಗಿ ಶ್ರಮಿಸಿದ ಇವರು ಸಾಕಷ್ಟು ಅಪನಿಂದನೆಗೆ ಗುರಿಯಾಗಿದ್ದುದು ವಿಪರ್ಯಾಸದ ಸಂಗತಿ ಇವರ ನಿಸ್ವಾರ್ಥದ ಬದುಕು ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಮಾತನಾಡಿ ದಿವಂಗತ ಎಲ್ ಜಿ ಹಾವನೂರು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರವರ ಪರಿಶ್ರಮದಿಂದ ಸವಲತ್ತು ಪಡೆದಂತ ವ್ಯಕ್ತಿಗಳು ಸಮಾಜಮುಖಿಯಾಗಿ ಕೆಲಸ ಮಾಡದೆ ಸ್ವಾರ್ಥ ಬದುಕನ್ನು ಕಟ್ಟಿಕೊಂಡಿರುವುದು ಅವರ ಮನಸ್ಸಿಗೆ ತುಂಬಾ ದುಃಖವನ್ನುಂಟು ಮಾಡಿದ್ದು ಜೀವಿತದ ಕೊನೆಯವರೆಗೂ ಇಬ್ಬರು ನಾಯಕರು ಪರಿ ತಪಿಸುತ್ತಿದ್ದರು ಇಡೀ ವ್ಯವಸ್ಥೆಯ ವಿರೋಧ ಕಟ್ಟಿಕೊಂಡು ಹಿಂದುಳಿದ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ ಅವರ ಮನೋಧರ್ಮ ನಿಜಕ್ಕೂ ಶ್ಲಾಘನೀಯವಾದುದು. ಈ ಹಿನ್ನೆಲೆಯಲ್ಲಿ ಹಿಂದುಳಿದ ಸಮುದಾಯದ ಎಲ್ಲಾ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಸಮುದಾಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆ ತರುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕಾದ ಔಚಿತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಎಸಿಪಿ ಪಂಪಾಪತಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ನಿರ್ದೇಶಕರಾದ ಗುಡ್ಡೆಕಾಯಿ ಗೋಪಾಲಕೃಷ್ಣ, ತುಳಸಿರಾಮ್, ಸಿಂಗಾಪುರ ವೆಂಕಟೇಶ್, ನಿವೃತ್ತ ಮುಖ್ಯ ಇಂಜಿನಿಯರ್ ಕೆಂಪುರಾಮಯ್ಯ ಕೊಂದಾಸ್ಪುರ ರಾಜಪ್ಪ, ಅನಂತಯ್ಯ ಸೇರಿದಂತೆ ಇನ್ನಿತರರಿದ್ದರು.