ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಒಂದಕ್ಕೊಂದು ನಂಟು ಹಾಕಿಕೊಂಡೇ ಇವೆ. ಯಾವೂದೂ ಸಹ ಅಂಟಿಲ್ಲದೆ ಸ್ವತಂತ್ರವಾಗಿ ಇಲ್ಲವೇ ಇಲ್ಲ ನಾವು ನಮ್ಮ ಇಚ್ಛೆ ಮತ್ತು ಪ್ರಮೇಯಗಳಿಲ್ಲದೆಯೇ ಎಲ್ಲಕ್ಕೂ ನಂಟು ಹಾಕಿಕೊಂಡಿರುತ್ತೇವೆ. ಎಷ್ಟೋ ನಂಟುಗಳು ನಮ್ಮ ಅರಿವಿಗೇ ಬಂದಿರುವುದಿಲ್ಲ. ಕೆಲವರು ” ಇದಕ್ಕೆ ನನಗೆ ಸಂಬಂಧವಿಲ್ಲ” ಎನ್ನುವ ಮಾತನ್ನು ಹೇಳುವುದು ನಾವು ಕೇಳಿರಬಹುದು. ಆದರೆ ಇರುವ ಸಂಬಂಧ ಅವರನ್ನು ಮುಟ್ಟುವ ತನಕ ಅದು ಅವರಿಗೆ ಅರಿವಾಗಿರುವುದಿಲ್ಲ, ಅಷ್ಟೇ. ಈ ಸಂಭಂಧಗಳಲ್ಲಿ ಕೆಲವು ವೈಯಕ್ತಿಕ, ಕೆಲವು ಸಾಮೂಹಿಕ, ಕೆಲವು ಸಾಮಾಜಿಕ ಮತ್ತು ಕೆಲವು ರಾಷ್ಟ್ರೀಯ. ಆದರೆ ಸಂಭಂದವಿಲ್ಲವೆನ್ನಲಾಗದು.ನಮ್ಮ ಸಂಬಂಧಗಳು ಎಷ್ಟು ಗಟ್ಟಿ ಅಥವಾ ಎಷ್ಟು ಟೊಳ್ಳು ಎನ್ನುವುದು ಆ ವಸ್ತು, ವ್ಯಕ್ತಿ ಅಥವಾ ವಿಷಯದೊಂದಿಗೆ ನಮ್ಮ ಸಂಬಂಧದ ತೀವ್ರತೆ ಮತ್ತು ಆಳದ ಮೇಲೆ ಅಧಾರಪಟ್ಟಿರುತ್ತದೆ. ನಾವು ಬಹಳಷ್ಟುಜನ ಸಂಸಾರದಲ್ಲಿ ಇದ್ದರೂ ಸನ್ಯಾಸಿಗಳ ತರಹೆ ಇರುವವರನ್ನು ಕಂಡಿದ್ದೇವೆ ಮತ್ತು ಮತ್ತೆ ಹಲವರು ಬೇರೆ ಯಾವ ವಿಷಯದ ಬಗ್ಗೆಯೂ ಯೋಚನೆ ಮಾಡದೆ, ಕೇವಲ ಜಗತ್ತಿನಲ್ಲೇ ಮುಳುಗಿರುವವರೂ ಇದ್ದಾರೆ. ಇದು ಬಿಟ್ಟರೆ ಬೇರೆ ಇಲ್ಲವೇ ಇಲ್ಲ ಎಂದು ಭಾವಿಸಿ ಈ ಜಗತ್ತಿಗೆ ಮತ್ತು ಈ ಜಗತ್ತಿನ ಎಲ್ಲಕ್ಕ್ಕೂ ಅಂಟಿಕೊಂಡಿರುವವರು ಬೇಕಾದಷ್ಟು ಜನ ಸಿಗುತ್ತಾರೆ. ಇಲ್ಲೇ ಇದ್ದು ಎಲ್ಲ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರೂ ಯಾವುದಕ್ಕೂ ಅಂಟದವರೂ ಇದ್ದಾರೆ. ಇದ್ದೂ ಇಲ್ಲದಂತಿರುವುದು ಒಂದು ಯೋಗ. ಅದು ಅಭ್ಯಾಸದಿಂದ ಮತ್ತು ಸಂಸ್ಕಾರದಿಂದ ಬರುತ್ತದೆ.ಅದಕ್ಕೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುವುದನ್ನು ಮತ್ತೊಮ್ಮೆ ನೋಡಿ. ಹೊರಜಗತ್ತಿಗೆ ಎಲ್ಲವನ್ನೂ ತಲೆಯಮೇಲೆ ಹೊತ್ತುಕೊಂಡು, ತನ್ನ ಜವಾಬ್ದಾರಿ ಎಂಬಂತೆ, ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವ ಒಬ್ಬ ಸೇವಕನಂತೆ(ಭಂಟ) ಎಲ್ಲಕ್ಕೂ ಅಂಟಿಕೊಂಡು ಕೆಲಸಮಾಡು. ಆದರೆ ಅಂತರಂಗದಲ್ಲಿ ಯಾವುದನ್ನೂ ಒಂದು ಅಭ್ಯಾಸವನ್ನಾಗಿಸಿಕೊಳ್ಳುವುದೋ ಅಥವಾ ಸ್ವಾಭಾವವಾಗಿಸಿಕೊಳ್ಳುವುದೋ ಮಾಡದೆ ಮನಸ್ಸು ಬುದ್ಧಿ ದೇಹಾತ್ಮಗಳಿಗೆ ಇವ್ಯಾವುದರ ಅಂಟೂ ಅಂಟದ ರೀತಿ ಇದ್ದರೆ ಒಳ್ಳೆಯದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.ಭಗವಂತನನ್ನೇ ನಂಬಿ, “ಪದ್ಮಪತ್ರಮಿವಾಂಭಸಿ – ನೀರಿನಲ್ಲಿರುವ ಕಮಲದೆಲೆಯಂತೆ ಅಂಟಿಯೂ ಅಂಟದಂತಿರುವ ನಿರ್ಲಿಪ್ತ” ಜೀವನವನ್ನು ನಡೆಸಿದರೆ, ಸುಖ – ದುಃಖಗಳ ವರ್ತುಲದಿಂದ ಹೊರಗೆ ನಿಂತು ಕೇವಲ ಸಾಕ್ಷೀ ಭಾವದಿಂದ ನೋಡುತ್ತಾ ಆನಂದವಾಗಿರಬಹುದು. ನಮ್ಮ ಸುಖ, ದುಃಖ, ನೋವು, ನಲಿವು, ಆನಂದ, ಪ್ರೀತಿ ಪ್ರೇಮ ಮುಂತಾದ ಎಲ್ಲ ಭಾವಗಳಿಗೂ ಈ ಜಗತ್ತಿನೊಂದಿಗೆ ನಮಗೆ ಇರುವ ಅಂಟಿನ ತೀವ್ರತೆಯ ಮೇಲೆ ಅಧಾರಪಟ್ಟಿದೆ. ನಮಗೇನು ಬೇಕು ಎಂದು ನಿರ್ಧರಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನಿತ್ತಿದ್ದಾನೆ , ಪರಮಾತ್ಮ ಆಯ್ಕೆ ನಮ್ಮದು ಅದರಿಂದ ಬರುವ ಎಲ್ಲ ಫಲಗಳೂ ನಮ್ಮದು.

Leave a Reply

Your email address will not be published. Required fields are marked *