ಕೆ ಎಸ್ ಜೆ ಯು ಯೂನಿಯನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಕ್ರೀಡೋಪಕರಣಗಳನ್ನು ವಿತರಣೆ

ಪಾವಗಡ: ಸರ್ಕಾರಿ ಶಾಲೆಗಳನ್ನು ಹೃದಯ ಶ್ರೀಮಂತಿಕೆ ಹಾಗೂ ಆರ್ಥಿಕವಾಗಿ ಸದೃಢರಾಗಿರುವವರು ಶಾಲೆಗಳನ್ನು ದತ್ತು ಪಡೆದರೆ ಮುಂದಿನ ದಿನಗಳಲ್ಲಿ ಯಾವುದೇ ಖಾಸಗಿ ಶಾಲೆಗಿಂತಲೂ ಸರ್ಕಾರಿ ಶಾಲೆಗಳು ಕಡಿಮೆಯಿರುವುದಿಲ್ಲ ಎಂದು ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ತಾಲ್ಲೂಕು ಅಧ್ಯಕ್ಷ ಫಾಸ್ಟಿನ್ ಮೈಕಲ್ ಪ್ರದೀಶ್ ಅವರು ಹೇಳಿದರು.
ಪಟ್ಟಣದ ಶನಿಮಹಾತ್ಮ ದೇವಸ್ಥಾನ ಹಿಂಭಾಗದಲ್ಲಿರುವ ನೂರು ವರ್ಷ ಇತಿಹಾಸವುಳ್ಳ ಮೊದಲ ಕನ್ನಡ ಸರ್ಕಾರಿ ಶಾಲೆ ಆವರಣದಲ್ಲಿ ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿದ್ದು ಶಿಕ್ಷಣ ಖಾಸಗೀಕರಣ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಸಂಘ ಸಂಸ್ಥೆಗಳು ಸರ್ಕಾರದಿಂದ ಸಿಗುವ ಸವಲತ್ತುಗಳೊಂದಿಗೆ ತಮ್ಮ ಕೈಲಾದ ಮಟ್ಟಿಗೆ ಪ್ರೋತ್ಸಾಹ ನೀಡಿದರೆ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಇಂಗ್ಲೀಷ್ ಭಾಷೆಯ ಪಾತ್ರ ಹೆಚ್ಚಾಗಿದ್ದು ಪ್ರಪಂಚದಾದ್ಯಂತ ವ್ಯವಹಾರಿಕ ಭಾಷೆಯಾಗಿರುವ ಕಾರಣ ಕನ್ನಡ ಭಾಷೆ ಕಲಿಯುವ ಆಸಕ್ತಿ ಕಡಿಮೆಯಾಗುತ್ತಿದೆ. ಮಾತೃ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.
ಹಿರಿಯ ಪತ್ರಕರ್ತ ಇಮ್ರಾನ್ ಉಲ್ಲಾ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬುನಾದಿ ಹಾಕಬೇಕು. ಶಿಕ್ಷಕರಿಗೆ ಭೋದನೆಯ ಜೊತೆಗೆ ಬಿಸಿಯೂಟ ಮಾಡಿಸುವ ಜವಾಬ್ದಾರಿ ಅವರ ಮೇಲಿದ್ದು ಹೊರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಬಂಡವಾಳ ಶಾಹಿಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಪೋಷಕರಿಗೆ ಲಕ್ಷಾಂತರ ವ್ಯಯ ಮಾಡಿ ಶಿಕ್ಷಣ ಕೊಡಿಸುವ ಪರಿಸ್ಥಿತಿ ಎದುರಾಗಿದೆ. ಕೆಲ ಖಾಸಗಿ ಶಾಲೆಗಳು ಹೊರಗಡೆಯಿಂದ ನೋಡಲು ಸುಂದರವಾಗಿ ಕಾಣವುದ್ದಕ್ಕೆ
ಮಾತ್ರ ಸೀಮಿತವಾಗಿವೆ ಎಂದರು.ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಶಿಕ್ಷಣವನ್ನು ನೀಡಲು ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಪೋಷಕರು ಹೆಚ್ಚಿನ ಆದ್ಯತೆಯನ್ನು ಸರ್ಕಾರಿ ಶಾಲೆಗಳಿಗೆ ಕೊಟ್ಟು ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಮುಖ್ಯ ಶಿಕ್ಷಕ ಮಾರುತೀಶ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಿಂತ ಭೋದನೆಯಲ್ಲಿ ಕಡಿಮೆ ಇರುವುದಿಲ್ಲ. ಉನ್ನತ ಶಿಕ್ಷಣ ಪಡೆದಿರುವ ಶಿಕ್ಷಕರನ್ನೇ ಸರ್ಕಾರದಿಂದ ನೇಮಕ ಮಾಡಿರುತ್ತಾರೆ. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನದಾಗಿ ದಾಖಲಿಸಬೇಕು. ಪಟ್ಟಣದ ಹೃದಯ ಭಾಗದಲ್ಲಿರುವ ಶಾಲೆ ಇದಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಹಲವರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅನಿಲ್ ಯಾದವ್, ಖಜಾಂಚಿ ರಾಜ್ ಕುಮಾರ್, ಕಾರ್ಯದರ್ಶಿ ಪಿ.ಜಿ.ಶಿವಕುಮಾರ್ (ಕನ್ನಡದ ಕುಮಾರ್), ನಿರಂಜನ್ ಕುಮಾರ್ ಎನ್, ಗೋವರ್ಧನ್, ಲಕ್ಷೀದೇವಿ ಗೋವರ್ಧನ್, ಶಿಕ್ಷಕಿ ಶೋಭ ಇದ್ದರು.

Leave a Reply

Your email address will not be published. Required fields are marked *