ಹೆಚ್ ಸಿ ತಮ್ಮೇಶ್ ಗೌಡ  ನೇತೃತ್ವದಲ್ಲಿ ನಡೆದ 2ನೇ ವರ್ಷದ ಉತ್ಸವ :

101 ದೇವತೆಗಳಿಗೆ ಮಹಾ ಆರತಿ ಬೆಳಗಿದ ಸಹಸ್ರಾರು ಮಾತೆಯರು :

ಜಾನಪದ ಕಲಾ ಪ್ರದರ್ಶನ ದೊಂದಿಗೆ ಬೃಹತ್ ಶೋಭಾಯಾತ್ರೆ :

ಬ್ಯಾಟರಾಯನಪುರ : ಕೇಸರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಕವಿಕಾ ಮಂಡಳಿ ನಿಕಟಪೂರ್ವ ಅಧ್ಯಕ್ಷ ಹೆಚ್ ಸಿ ತಮ್ಮೇಶ್ ಗೌಡ ನೇತೃತ್ವದಲ್ಲಿ ಭಾನುವಾರ ವಿದ್ಯಾರಣ್ಯಪುರದ ಎನ್.ಟಿ.ಐ. ಮೈದಾನದಲ್ಲಿ ಆಯೋಜಿಸಿದ್ದ 2ನೇ ವರ್ಷದ ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ನೆರವೇರಿತು. ನಮ್ಮ ಬ್ಯಾಟರಾಯನಪುರ ದಸರಾ ಉತ್ಸವದ ಅಂಗವಾಗಿ ಸಹಸ್ರಾರು ಮಹಿಳೆಯರಿಂದ 101 ಗ್ರಾಮ ದೇವತೆಗಳಿಗೆ ಪೂಜೆ, ಮಹಾ ಆರತಿ ಸೇರಿದಂತೆ ವಿವಿಧ ದೇವತಾ ಕಾರ್ಯಗಳನ್ನು ಏರ್ಪಡಿಸಲಾಗಿತ್ತು. 

ಬ್ಯಾಟರಾಯನಪುರ ಕ್ಷೇತ್ರದ ಧಾರ್ಮಿಕ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಮೂಡಿಸುವಂತಿದ್ದ ನಮ್ಮ ಬ್ಯಾಟರಾಯನಪುರ ದಸರಾ ಉತ್ಸವದಲ್ಲಿ  ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಸಂಸದ  ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ರಾಜುಗೌಡ,  ಬೆಂ‌.ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಮುಖಂಡರಾದ ಪಿ.ಕೆ. ರಾಜಗೋಪಾಲ್, ಜಿ.ಶ್ರೀನಿವಾಸ್, ಟಿ.ಪಿ.ಪ್ರಕಾಶ್, ಸಿ.ಎನ್. ನಾರಾಯಣಸ್ವಾಮಿ, ಲೋಹಿತ್ ಗೌಡ, ಮುನಿ ನರಸಿಂಹಯ್ಯ, ಭರತ್ ಮಂಜುನಾಥ್, ಮಂಜುನಾಥ್,  ತಿಂಡ್ಲು ಮಹೇಶ್, ಮಧುಸೂದನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು, ದಸರಾ ಉತ್ಸವವನ್ನು ಯಶಸ್ವಿಗೊಳಿಸಿದರು.

ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಜನಸಾಗರ :

ನಮ್ಮ ಬ್ಯಾಟರಾಯನಪುರ ದಸರಾ ಉತ್ಸವದ ಭಾಗವಾಗಿ 101 ಗ್ರಾಮ ದೇವತೆಗಳಿಗೆ ಪೂಜೆ, ಮಹಾ ಆರತಿ ಸಲ್ಲಿಸಿದ ನಂತರ ಮದ್ಯಾಹ್ನ 12 ಗಂಟೆಗೆ ವಿದ್ಯಾರಣ್ಯಪುರದ ಎನ್.ಟಿ.ಐ.ಮೈದಾನದಿಂದ ಆರಂಭವಾದ 101 ಗ್ರಾಮ ದೇವತೆಗಳ ಬೃಹತ್ ಶೋಭಾ ಯಾತ್ರೆಯಲ್ಲಿ ಅಸಂಖ್ಯಾತ ಜನ ಪಾಲ್ಗೊಳ್ಳುವ ಮೂಲಕ ಬೃಹತ್ ಜನಸಾಗರವೇ ಏರ್ಪಟ್ಟಿತ್ತು. ಬೃಹತ್ ಶೋಭಾ ಯತ್ರೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದು, ದೇಶದ ಹೆಸರಾಂತ ಸಾಂಸ್ಕೃತಿಕ ಕಲೆಗಳಾದ ಡೊಳ್ಳುಕುಣಿತ, ಕಂಸಾಳೆ, ಪಟದ ಕುಣಿತ, ವೀರಗಾಸೆ, ಲಂಬಾಣಿ ನೃತ್ಯ, ಗಾರುಡಿ ಬೊಂಬೆ, ಯಕ್ಷಗಾನ, ಪೂಜಾ ಕುಣಿತ, ಚಂಡಮದ್ದಳೆ, ನಾಸಿಕ್ ಡೋಲು, ತಮಟೆ ವಾದನ, ಕೇರಳದ ಬೊಂಬೆ ಕುಣಿತ, ರಾಜಾಸ್ಥಾನ ಮತ್ತು ಒರಿಸ್ಸಾ ವಾದ್ಯಗಳು ಸೇರಿದಂತೆ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಪ್ರಸಿದ್ಧ ಕಲಾತಂಡಗಳ ಕಲಾ ಪ್ರದರ್ಶನದ ನಡುವೆ ಶೋಭಾ ಯಾತ್ರೆ ಸಾಗಿತು. ವಿದ್ಯಾರಣ್ಯಪುರ, ನಂಜಪ್ಪ ವೃತ್ತ, ತಿಂಡ್ಲು ವೃತ್ತ, ಸಹಕಾರ ನಗರ, ಕೊಡಿಗೇಹಳ್ಳಿ ವೃತ್ತದ ಮಾರ್ಗವಾಗಿ ಬ್ಯಾಟರಾಯನಪುರದ ಕೋದಂಡ ರಾಮಸ್ವಾಮಿ ದೇವಾಲಯದ ವರೆಗೆ ಶೋಭಾ ಯಾತ್ರೆ ಸಾಗಿತು. ಅಲ್ಲಿ ಅಂತಿಮ ಪೂಜೆಯ ನಂತರ 101 ದೇವತೆಗಳಿಗೆ ಶಾಸ್ತ್ರೋಕ್ತವಾಗಿ ಬೀಳ್ಕೊಡಲಾಯಿತು.

ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ ಕುರಿತು ಕೇಸರಿ ಫೌಂಡೇಶನ್ ಸಂಸ್ಥಾಪಕ, ಉತ್ಸವದ ರುವಾರಿ ಹೆಚ್.ಸಿ. ತಮ್ಮೇಶ್‌ಗೌಡ ಮಾತನಾಡಿ ‘ಬ್ಯಾಟರಾಯನಪುರ ಕ್ಷೇತ್ರವನ್ನು ಸಾಂಸ್ಕೃತಿಕವಾಗಿ ಒಟ್ಟುಗೂಡಿಸ ಬೇಕೆಂಬ ಸಂಕಲ್ಪದ ಮೇರೆಗೆ, ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಸಿರುವ ವಿವಿಧ ಭಾಷೆ, ರಾಜ್ಯ, ಸಂಸ್ಕೃತಿಯ ಜನರನ್ನು ಒಟ್ಟುಗೂಡಿಸಿ, ಎಲ್ಲರ ವಿಶ್ವಾಸದ ಹಿನ್ನೆಲೆಯಲ್ಲಿ ನಮ್ಮ ಬ್ಯಾಟರಾಯನಪುರ ದಸರಾ ಉತ್ಸವವನ್ನು ಆಯೋಜಿಸ ಲಾಗಿದ್ದು, ಇದರಲ್ಲಿ ಎರಡನೇ ವರ್ಷವೂ ಸಹ ಸಫಲತೆ ಪಡೆದಿರುವುದು ನಿಜಕ್ಕೂ ಸಂತೋಷ ತಂದಿದೆ. ಬ್ಯಾಟರಾಯನಪುರದ ಸಾಂಸ್ಕೃತಿಕ ಒಗ್ಗಟ್ಟು ಬೆಂಗಳೂರು ನಗರದಲ್ಲಿ ರಿಂಗಣಿಸುವಂತಾಗಬೇಕು, ಬ್ಯಾಟರಾಯನಪುರ ದಸರಾ ಉತ್ಸವವನ್ನು ನಾವೂ ಕಣ್ತುಂಬಿಕೊಳ್ಳಬೇಕೆಂಬ ಹಂಬಲ ಬೆಂಗಳೂರು ನಗರದ ಜನರಲ್ಲಿ ಹುಟ್ಟುವಂತಾಗಬೇಕು, ಬ್ಯಾಟರಾಯನಪುರದ ಸಾಂಸ್ಕೃತಿಕ ವೈಭವ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬೇಕೆಂಬುದು ನಮ್ಮ ಬ್ಯಾಟರಾಯನಪುರ ದಸರಾ ಉತ್ಸವದ ಮೂಲ ಉದ್ದೇಶವಾಗಿದೆ ಎಂದ ಅವರು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ 101 ಗ್ರಾಮ ದೇವತೆಗಳ ಆಶೀರ್ವಾದ ಇಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ದೊರೆಯುವಂತಾಗಬೇಕು, ಬ್ಯಾಟರಾಯನಪುರ ಕ್ಷೇತ್ರದ ಜನತೆಯ ಕಲ್ಯಾಣ, ಸುಭಿಕ್ಷತೆ ಈ ಉತ್ಸವದ ಮೂಲ ಉದ್ದೇಶವಾಗಿದೆ ಎಂದರು.

Leave a Reply

Your email address will not be published. Required fields are marked *