



ಪದವಿ ವಿದ್ಯಾರ್ಥಿಗಳಿಗೆ ಡಾ.ಜಿ.ಎಸ್.ಮೂರ್ತಿ ಕರೆ :
ಯಲಹಂಕ : ನೂತನ ಪದವೀಧರರು ಮೊದಲು ಗುರಿ ಯಾವುದೆಂದು ಖಚಿತ ಪಡಿಸಿಕೊಂಡು ನಂತರ ಆ ಗುರಿ ತಲುಪುವ ಹಾದಿಯಲ್ಲಿ ಸಾಗಬೇಕೆಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ.ಬಿ.ಎಸ್.ಮೂರ್ತಿ ಪದವಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಯಲಹಂಕ ದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ಶನಿವಾರ ಆಯೋಜಿಸಿದ್ದ 13ನೇ ಪದವಿ ಪ್ರಧಾನ ಸಮಾರಂಭ ದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿ ‘ವಿದ್ಯಾರ್ಥಿಗಳು ಮುಂದಿನ ಇಪ್ಪತ್ತು ವರ್ಷಗಳಲ್ಲಿ ತಾನು ಎಲ್ಲಿರಬೇಕು, ತನ್ನ ಸಾಧನೆ ಎಷ್ಟಿರಬೇಕು ಎಂಬುದನ್ನು ಈಗಲೇ ಯೋಜಿಸಿಕೊಳ್ಳಬೇಕು. ಆಗ ಮಾತ್ರ ನಾವು ನಿರ್ದಿಷ್ಟ ಗುರಿ ತಲುಪಲು ಸಾಧ್ತ, ಈ ದಿಸೆಯಲ್ಲಿ ನಮಗೆ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಬೇಕು. ಧೈರ್ಯ ಮತ್ತು ಆತ್ಮವಿಶ್ವಾಸ ವಿದ್ದರೆ ಸವಾಲುಗಳು ಸುಲಭವಾಗಿ ಪರಿಹಾರವಾಗುತ್ತವೆ, ಹಾಗೆಯೇ ಅಗತ್ಯ ಕೌಶಲ್ಯ ವನ್ನು ರೂಢಿಸಿಕೊಳ್ಳಬೇಕು. ನಾವು ಕಲಿತ ಕೌಶಲ್ಯವೇ ಕೊನೆಯಲ್ಲ, ಕಾಲಾನುಕ್ರಮದಲ್ಲಿ ಕೌಶಲಗಳು ಬದಲಾಗುತ್ತವೆ, ಹೊಸ ಹೊಸ ರೂಪ ಪಡೆದುಕೊಳ್ಳುತ್ತವೆ.
ಒಂದು ಹಂತದಲ್ಲಿ ನಿಮ್ಮನ್ನು ಸಂರಕ್ಷಿಸುವುದು, ನಿಮ್ಮ ಅಸ್ತಿತ್ವವನ್ನು ಸಾಬೀತು ಪಡಿಸುವುದು ನೀವು ಅಳವಡಿಸಿ ಕೊಳ್ಳುವ ಕೌಶಲ್ಯವೇ ಹೊರತು ಮೂಲಭೂತವಾಗಿ ಗಳಿಸಿದ ಪದವಿಗಳಲ್ಲ ಎಂದ ಅವರು ಮುಂಬರುವ ದಿನಗಳಲ್ಲಿ ಭಾರತವನ್ನು ವಿಶ್ವಗುರು ಎಂದು ಇತರೆ ರಾಷ್ಟ್ರಗಳು ಗೌರವಿಸಬೇಕಾದರೆ ನಾವು ಆತ್ಮವಿಶ್ವಾಸದಿಂದ ಸದೃಢ ಹೆಜ್ಜೆಗಳನ್ನು ಇಡಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ನಿಟ್ಟೆ ಎಜುಕೇಶನ್ ಟ್ರಸ್ಟ್ ನ ತಂತ್ರಜ್ಞಾನ ಬೋಧನಾ ವಿಭಾಗದ ಉಪಾಧ್ಯಕ್ಷ ಪ್ರೊ.ಗೋಪಾಲ ಮುಗೆರಾಯ ಮಾತನಾಡಿ ‘ನಿಟ್ಟೆ ಶಿಕ್ಷಣ ಸಂಸ್ಥೆ ಶಿಕ್ಷಣದ ಗುಣಮಟ್ಟದ ವರ್ಧನೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಹಿರಿಯ ಸಲಹೆಗಾರರಾದ ಪ್ರೊ.ಎನ್.ಆರ್.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಅತ್ಯುತ್ತಮ ಶೈಕ್ಷಣಿಕ ಕ್ಷಮತೆ ದಾಖಲಿಸಿದ ಎಲೆಕ್ಟ್ರಿಕ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುರುದತ್ ಬಿ.ಎ.ಪ್ರತಿಷ್ಠಿತ ನಿಟ್ಟೆ ಗುಲಾಬಿ ಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕವನ್ನು ಸ್ವೀಕರಿಸಿದರು. ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ತೇಜಶ್ರೀ ಕೃಷ್ಣಮೂರ್ತಿ ರವರಿಗೆ ಲಭಿಸಿತು. ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಕನಾಡ್ ಡಿ.ಎಸ್.ಪಡೆದರು.
ಪ್ರತಿ ವಿಭಾಗದಲ್ಲಿ ಒಟ್ಟು13 ಪ್ರತಿಭಾನ್ವಿತರಿಗೆ ಚಿನ್ನದ ಪದಕಗಳನ್ನು (ಸ್ನಾತಕ 7 ಚಿನ್ನದ ಪದಕ, ಸ್ನಾತಕೋತ್ತರ 6.) ವಿತರಿಸಲಾಯಿತು. ಪ್ರತಿ ವಿಭಾಗದ ಪ್ರಥಮ 10 ರ್ಯಾಂಕ್ ಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ರ್ಯಾಂಕ್ ಸರ್ಟಿಫಿಕೇಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರೋಹಿತ್ ಪೂಂಜ ನೂತನ ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ದ ಪ್ರಾಂಶುಪಾಲರಾದ ಡಾ.ಹೆಚ್.ಸಿ.ನಾಗರಾಜ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.