



ಯಲಹಂಕ : ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ ನ್ಯಾಯಾಂಗ ಬಡಾವಣೆ, ಶಂಕರ್ ನಾಗ್ ಪಾರ್ಕ್ ಬಳಿಯ ರಸ್ತೆಗಳ ಅಭಿವೃದ್ಧಿ, ಅಟ್ಟೂರು ವಾರ್ಡ್3 ರ ವ್ಯಾಪ್ತಿಯಲ್ಲಿ ನೂತನ ಅಂಬೇಡ್ಕರ್ ಭವನ ಮತ್ತು ಶೌಚಾಲಯ ಉದ್ಘಾಟನೆ, ಅಟ್ಟೂರು ಮತ್ತು ಎಂ ಎಸ್ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಕಾಮಗಾರಿ ಸೇರಿದಂತೆ 2.40 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಅಮೃತ ನಗರೋತ್ಥಾನ ಯೋಜನೆಯ ಅಡಿಯಲ್ಲಿ ಇಂದು ಅಟ್ಟೂರು ಮತ್ತು ಯಲಹಂಕ ಉಪನಗರ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಶೌಚಾಲಯ, ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕಾಮಗಾರಿ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡುವುದರ ಜತೆಗೆ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯದ ಒಟ್ಟು ಆದಾಯದಲ್ಲಿ ಶೇ.60% ರಷ್ಟು ಆದಾಯಯನ್ನು ನೀಡುವ ಬೆಂಗಳೂರು ನಗರಕ್ಕೆ ಅಭಿವೃದ್ಧಿ ವಿಷಯದಲ್ಲೂ ಅದೇ ಅನುಪಾತವನ್ನು ಅನುಸರಿಸಿದರೆ ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಬಹುದು, ಆದರೆ ಕಳೆದ ಆರು ತಿಂಗಳಿನಿಂದ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತವಾಗಿದ್ದು, ನಗರದ ಜನತೆಯ ಹಿತ ಕಾಪಾಡುವುದು ಕಷ್ಟದ ಕೆಲಸವಾಗಿದೆ. ಅಭಿವೃದ್ಧಿ ವಿಷಯದಲ್ಲಿ ಇದೇ ರೀತಿಯ ದುಸ್ಥಿತಿ ಮುಂದುವರಿದರೆ ನಗರದಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳು ವಲಸೆ ಹೋಗುವ ಮೂಲಕ ಬೆಂಗಳೂರು ನಗರದ ಗತಿ ಅಧೋಗತಿ ಯಾಗುವುದರಲ್ಲಿ ಸಂಶಯವಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬೆಂ.ನಗರ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಎ.ಸಿ.ಮುನಿಕೃಷ್ಣಪ್ಪ, ಡಾ.ಶಶಿಕುಮಾರ್, ನಟರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಅಶ್ವತ್ ನಾರಾಯಣ ಅಂತ್ಯಜ, ರಾಜ್ಯ ಸಂಘಟನಾ ಸಂಯೋಜಕ ಅಟ್ಟೂರು ನಾಗರಾಜ್, ಬಿಜೆಪಿ ಮುಖಂಡರಾದ ಪವನ್, ಎಲ್ ಬಿ ಎಸ್ ಮುರಳಿ, ವೀರಭದ್ರೇಗೌಡ, ಅಟ್ಟೂರು ವಿಶ್ವ, ವೆಂಕಟಾಲ ಮುನಿರಾಜು, ಮಹಿಳಾ ಬಿಜೆಪಿ ಮುಖಂಡರಾದ ರೇಣುಕಮ್ಮ, ಕಾರ್ಯಪಾಲಕ ಅಭಿಯಂತರ ಸುಧಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಂದೀಶ್, ಮೋಹನ್ ಸೇರಿದಂತೆ ಇನ್ನಿತರರಿದ್ದರು.