ವರದಿ -ಸದಾನಂದ

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿ ವ್ಯಾಪ್ತಿಯಲ್ಲಿ ಪಿಂಚಣಿ ದಾರರಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಇಲಾಖೆಯವರು ದಿಬ್ಬೂರಹಳ್ಳಿ ಪಂಚಾಯಿತಿಯಲ್ಲಿ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿ‌ ಅಧಿಕಾರಿಗಳು ಪಿಂಚಣಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಉಪ ತಹಶೀಲ್ದಾರ್ ರಮೇಶ್ ರವರು ಗ್ರಾಮೀಣ ಪ್ರದೇಶಗಳಲ್ಲಿ ಪಿಂಚಣಿ ಸೌಲಭ್ಯ ತುಂಬಾ ಅನುಕೂಲಕರವಾಗಿದ್ದು ಕೆಲವರಿಗೆ ಇದೇ ಜೀವನೋಪಾಯವಾಗಿದೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ಗಂಡಾಗಲಿ ಅಥವಾ ಹೆಣ್ಣಾಗಲಿ 60 ವರ್ಷ ತುಂಬಿದರೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ಸೌಲಭ್ಯವನ್ನು ಪಡೆಯಬಹುದು, ಅಂಗವೈಕಲ್ಯ ವೇತನ ಅಂದರೆ ಹುಟ್ಟಿನಿಂದಲೂ ದೈಹಿಕ ವಿಕಲಾಂಗ ಇರುವವರು ಅಥವಾ ಅಪಘಾತದಿಂದ ದೇಹದ ಯಾವುದೇ ಭಾಗ ವೈಕಲ್ಯ ಆದಾಗ್ಯೂ ಅವರು ಅನುಕೂಲ ಮಾಡಿಕೊಳ್ಳಬಹುದು, ತದ ನಂತರ ಗಂಡ ಸತ್ತ ನಂತರ ಸರ್ಕಾರದಿಂದ ಬದುಕಿರುವ ಹೆಂಡತಿಗೆ ವಿಧವಾ ವೇತನವನ್ನು ನೀಡಲಾಗುವುದು,
ರೈತರು ಬೆಳೆಗಳ ಮೇಲೆ ಸಾಲ ಮಾಡಿ ಬೆಳೆಯಲ್ಲಿ ನಷ್ಟ ಸಂಭವಿಸಿ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ ಬದುಕಿರುವ ಹೆಂಡತಿಗೆ ರೈತ ಪಿಂಚಣಿ ನೀಡಲಾಗುವುದು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ ಮನಸ್ವಿನಿ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿ ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತದೆ.
ಮೇಲಿನ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಲು ಸಂಬಂಧಪಟ್ಟ ದಾಖಲೆಗಳೊಂದಿಗೆ ನಮ್ಮ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ಊರಿನ ಗ್ರಾಮ ಸಹಾಯಕರಿಗೆ ಕೊಟ್ಟರೆ ಅವರು ನಾಡ ಕಛೇರಿಯಲ್ಲಿ ಕಡತಗಳನ್ನು ಕಂಪ್ಯೂಟರ್ ನಲ್ಲಿ ಸೇರಿಸಿ ಕೇವಲ 3-4 ದಿನಗಳಲ್ಲಿ ನಿಮಗೆ‌ ಆದೇಶ ಪ್ರತಿಯನ್ನು ನಮ್ಮ ಗ್ರಾಮ ಸಹಾಯಕರೇ ತಮ್ಮ ಮನೆಗೆ ತಲುಪಿಸುತ್ತಾರೆ ಜೊತೆಗೆ ಸಾರ್ವಜನಿಕರು ಕೂಡ ತಿಳಿಯದೆ ಇರುವವರಿಗೆ ದಯವಿಟ್ಟು ಮಾಹಿತಿ ತಿಳಿಸಿ ಎಲ್ಲರಿಗೂ ಅನುಕೂಲವಾಗಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್
ರಾಜಸ್ವ ನಿರೀಕ್ಷಕರು ಸಾದಲಿ ಹೋಬಳಿ,
ಗ್ರಾಮ ಆಡಳಿತ ಅಧಿಕಾರಿಗಳು ಚೇತನ್, ಸುಭಾಷಿಣಿ, ಗೀತಾ ಹಾಗೂ ಗ್ರಾಮ ಸಹಾಯಕ ಅನಿಲ್ ಕುಮಾರ್ ಇದ್ದರು.

Leave a Reply

Your email address will not be published. Required fields are marked *