ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಯಾಜ್ಞವಲ್ಕ್ಯ ಜಯಂತಿ :
ಯಲಹಂಕ : ಭಾರತದ ಸಂವಿಧಾನ ರಚನೆಯಲ್ಲಿ ಯಾಜ್ಞವಲ್ಕ್ಯರ ರಾಜಧರ್ಮ ಸಂಹಿತೆ ಹೆಚ್ಚಿನ ಪ್ರಭಾವ ಬೀರಿದ್ದು, ಭಾರತ ಸಂವಿಧಾನ ರಚನೆಗೆ ಯಾಜ್ಞವಲ್ಕ್ಯರೇ ಪ್ರೇರಕ ಶಕ್ತಿ ಎಂದು ಹಿರಿಯ ವಿದ್ವಾಂಸ ಶಶಿಧರ್ ಅಭಿಪ್ರಾಯಪಟ್ಟರು.
ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಯಲಹಂಕದ ಗಾಯತ್ರೀ ಮಂದಿರದಲ್ಲಿ ಆಯೋಜಿಸಿದ್ದ ಯೋಗೀಶ್ವರ ಶ್ರೀ ಯಾಜ್ಞವಲ್ಕ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಅವರು ಮಾತನಾಡಿ ‘ಸಹಸ್ರಾರು ವರ್ಷಗಳ ಹಿಂದೆ ಸೂರ್ಯದೇವನನ್ನು ಆರಾಧಿಸಿ ಶುಕ್ಲ ಯಜುರ್ವೇದ ರಚಿಸಿ, ಸನಾತನ ಧರ್ಮಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಯೋಗೀಶ್ವರ ಶ್ರೀ ಯಾಜ್ಞವಲ್ಕ್ಯರು. ಭಾರತದ ಕಾನೂನು, ಗಣಿತ, ವಿಶೇಷವಾಗಿ ಭಾರತದ ಸಂವಿಧಾನದ ಮೇಲೆ ಯಾಜ್ಞವಲ್ಕ್ಯರ ರಾಜಧರ್ಮ ಸಂಹಿತೆ ಹೆಚ್ಚಿನ ಪ್ರಭಾವ ಬೀರಿದೆ.
ಇವರು ರಚಿಸಿರುವ ಸಾವಿರಾರು ಶ್ಲೋಕಗಳಲ್ಲಿ ಧರ್ಮ ಪ್ರಕರಣ, ರಾಜ ಪ್ರಕರಣ, ಕಾನೂನು ಪ್ರಕರಣಗಳ ಬಗ್ಗೆ ಭಾಷ್ಯ ಮತ್ತು ವಾಖ್ಯಾನಗಳನ್ನು ನೀಡಿದ್ದಾರೆ. ಭಾರತದ ಕಾನೂನು ಮತ್ತು ಸಂವಿಧಾನ ರಚನೆಯ ಮೇಲೆ ಯಾಜ್ಞವಲ್ಕ್ಯರ ಭಾಷ್ಯ ಮತ್ತು ವ್ಯಾಖ್ಯಾನಗಳ ಪ್ರಭಾವವಿದೆ, ಹಾಗಾಗಿಯೇ ಯಾಜ್ಞವಲ್ಕ್ಯರ ಭಾವಚಿತ್ರವನ್ನು ಲೋಕಸಭೆಯ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಭಾರತ ಸರ್ಕಾರ ಯಾಜ್ಞವಲ್ಕ್ಯರಿಗೆ ನೀಡಿರುವ ಗೌರವ ಎಂದರೆ ತಪ್ಪಾಗಲಾರದು ಎಂದರು.
ಯಾಜ್ಞವಲ್ಕ್ಯರ ಜಯಂತ್ಯೋತ್ಸವದ ಪ್ರಯುಕ್ತ ಯಾಜ್ಞವಲ್ಕ್ಯ ಗುರುಗಳ ಪೂಜೆ, ಪಂಚಾಮೃತ ಅಭಿಷೇಕ, ಗಣಹೋಮ, ಪುರಸ್ಸರ ಗಾಯತ್ರೀ ಹೋಮ ಸೇರಿದಂತೆ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಜಿ.ವೈದ್ಯನಾಥಶಾಸ್ತ್ರಿ, ಉಪಾಧ್ಯಕ್ಷರಾದ ವೈ.ಜಿ.ರಾಘವೇಂದ್ರರಾವ್, ಆರ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್ ಭೀಮಸೇನಾಚಾರ್ಯ, ಟಿ ಎಲ್ ಅರುಣ್ ಕುಮಾರ್, ಎಲ್ ಸಂಜೀವರಾಯ, ಜಿ.ವಿ.ಪ್ರಭಾಕರ, ನಿಕಟಪೂರ್ವ ಅಧ್ಯಕ್ಷ ವೈ ಎಸ್ ಶಿವರಾಮ್, ಎಸ್.ಪುರುಷೋ ತ್ತಮಾಚಾರ್ಯ, ಸೇರಿದಂತೆ ಇನ್ನಿತರ ಪದಾಧಿಕಾರಿಗಳಿದ್ದರು.
