
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಗ್ರಾ.ಪಂ.ನೂತನ ಉಪಾಧ್ಯಕ್ಷರಾಗಿ ಬಾಗಲೂರು ಗ್ರಾಮದ ಪದ್ಮಾವತಿ ಎ.ವೆಂಕಟರಾಜು ಗುರುವಾರ ಆಯ್ಕೆಯಾಗಿದ್ದಾರೆ.
ಬಾಗಲೂರು ಗ್ರಾ.ಪಂ.ಯಲ್ಲಿ ಒಟ್ಟು 26 ಜನ ಸದಸ್ಯರಿದ್ದು, ಬಿ.ಸಿ. ಲೋಕೇಶ್ ರವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪದ್ಮಾವತಿ ಎ.ವೆಂಕಟರಾಜು 20 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷ ರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಸಂತೋಷ್ ಕುಮಾರ್ ಬಿ. ಮತ್ತು ಐವರು ಇನ್ನಿತರ ಸದಸ್ಯರು ಚುನಾವಣಾ ಪ್ರಕ್ರಿಯೆಗೆ ಗೈರುಹಾಜರಾಗಿ ಮತ ಚಲಾಯಿಸದ ಹಿನ್ನೆಲೆಯಲ್ಲಿ ಪದ್ಮಾವತಿ ಎ.ವೆಂಕಟರಾಜು 20 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ನೂತನ ಉಪಾಧ್ಯಕ್ಷರನ್ನು ಗ್ರಾಮದ ಮುಖಂಡರು, ಬಾಗಲೂರು ಗ್ರಾ.ಪಂ.ಸದಸ್ಯರು ಸೇರಿದಂತೆ ಇನ್ನಿತರ ಗಣ್ಯರು ಅಭಿನಂದಿಸಿ ಗೌರವಿಸಿದರು.
ನಂತರ ಅವರು ಮಾತನಾಡಿ ‘ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದ ನನಗೆ ಈ ಪದವಿ ದೊರೆತಿದ್ದು, ಅವರಿಗೆ ಸದಾ ಚಿರ ಋಣಿ ಯಾಗಿರುತ್ತೇನೆ. ಗ್ರಾಮಾಭಿ ವೃದ್ಧಿಗಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ, ಮಾರ್ಗದರ್ಶದೊಂದಿಗೆ ದೊರೆತಿರುವ ಅಧಿಕಾರಾವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಡಿ.ಜಗನ್ನಾಥ್, ಎಂ.ಅಮರನಾರಾಯಣ,ಅನಿಲ್ ಕುಮಾರ್, ಕೆಂಪೇಗೌಡ, ಉಸ್ಮಾನ್ ಘನಿ, ಶಿವಣ್ಣ, ಪಿಳ್ಳೇಗೌಡ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಿದ್ದರು.