ಯಲಹಂಕ : ಯಲಹಂಕ ಕ್ಷೇತ್ರದ ಮಾರಸಂದ್ರ ಸಮೀಪವಿರುವ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್ ನ ಆವರಣದಲ್ಲಿ ಇರುವ ತುಳಸೀಕಟ್ಟೆ ಮತ್ತು ಅಶ್ವಥ ಕಟ್ಟೆಗೆ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ ಯವರು ಕೋಮು ಸಂಘರ್ಷದ ಲೇಪನ ಹಚ್ಚಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು, ಅಪಾರ್ಟ್ಮೆಂಟ್ ನ ನಿವಾಸಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅಪಾರ್ಟ್ಮೆಂಟ್ ನ ತುಳಸೀ ಕಟ್ಟೆ ಇರುವ ಸ್ಥಳದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಮಥಾಯಿ ಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸ್ಥಳೀಯ ನಾಗರೀಕರು, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಗಳಾದ ಸತೀಶ್ ಕಡತನಮಲೆ ಮಾತನಾಡಿ ‘ಪ್ರಾವಿಡೆಂಟ್ ವೆಲ್ವರ್ತ್ ಸಿಟಿ ಅಪಾರ್ಟ್ಮೆಂಟ್ ಆವರಣದಲ್ಲಿ ಇರುವ ತುಳಸೀ ಕಟ್ಟೆ, ಅಶ್ವಥ ಕಟ್ಟೆ ಇಂದು ನಿನ್ನೆಯದಲ್ಲ ನೂರಾರು ವರ್ಷಗಳಿಂದ ಇದೆ. ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನ ಜಾತ್ರೆ, ಉತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಇಲ್ಲಿನ ತುಳಸೀ ಕಟ್ಟೆ ಮತ್ತು ಅಶ್ವತ್ಥ ಕಟ್ಟೆ ಬಳಿ ಬಂದು ಪೂಜೆ ಸಲ್ಲಿಸುತ್ತಿರುವುದು ನೂರಾರು ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅಪಾರ್ಟ್ಮೆಂಟ್ ಮಾಲೀಕರಿಗೆ ಜಾಗ ಮಾರಾಟ ಮಾರಾಟ ಮಾಡುವ ವೇಳೆಯಲ್ಲಿ ರೈತರು ಈ ತುಳಸೀ ಕಟ್ಟೆಯ ಜಾಗವನ್ನು ಸರ್ಕಾರಿ ಜಾಗವಾಗಿ ಘೋಷಣೆ ಮಾಡಿ, ಹಾಗೆಯೇ ಉಳಿಸಬೇಕೆಂಬ ಷರತ್ತಿನ ಮೇಲೆಯೇ ತಮ್ಮ ಜಮೀನು ಮಾರಾಟ ಮಾಡಿದ್ದಾರೆ. ಇದುವರೆಗೂ ಎಲ್ಲವೂ ಸರಿಯಿತ್ತು, ಆದರೆ ಇತ್ತೀಚೆಗೆ ನಿವೃತ್ತ ಅಧಿಕಾರಿ ಕೆ.ಮಥಾಯಿ ಯವರು ಇಲ್ಲಿನ ತುಳಸೀ ಕಟ್ಟೆ ಮತ್ತು ಅಶ್ವತ್ಥ ಕಟ್ಟೆಗೆ ಕೋಮು ಸಂಘರ್ಷದ ಲೇಪನ ಹಚ್ಚಿ ಅದನ್ನು ತೆರವುಗೊಳಿಸಲು ಹುನ್ನಾರ ಮಡೆಸುತ್ತಿದ್ದು, ಸಾಮಾಜಿಕ ಜಾಲ ತಾಣ ಮತ್ತು ಮಾಧ್ಯಮಗಳ ಮೂಲಕ ಈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ಈ ಸ್ಥಳ ಇನ್ನೊಂದು ಕೆ.ಜಿ.ಹಳ್ಳಿ ಡಿ.ಜೆ.ಹಳ್ಳಿಯ ಘಟನೆಗೆ ಸಾಕ್ಷಿಯಾಗಲಿದೆ ಎಂದು ತಪ್ಪು ಮಾಹಿತಿ ಹರಡುತ್ತಿರುವುದು ವಿಷಾದದ ಸಂಗತಿ. 

ಅಪಾರ್ಟ್ಮೆಂಟ್ ನ ನಿವಾಸಿಗಳು ಧರ್ಮ, ಜಾತಿ, ಭಾಷೆಗಳ ಎಲ್ಲೆ ಮರೆತು ಆನ್ಯೂನ್ಯವಾಗಿ ಬದುಕುತ್ತಿದ್ದಾರೆ. ಹಬ್ಬಗಳಲ್ಲಿ ಪರಸ್ಪರರು ಪಾಲ್ಗೊಂಡು ಐಕ್ಯತೆಯಿಂದ ಇದ್ಧಾರೆ. ಇಂತಹ ನಂದಗೋಕುಲ ದಂತಹ ವಾತಾವರಣವಿರುವ ಅಪಾರ್ಟ್ಮೆಂಟ್ ನಲ್ಲಿ ಕೋಮು ಸಂಘರ್ಷದ ಕಿಡಿ ಹಚ್ಚುತ್ತಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ಸಾರುತ್ತಿರುವ, ಇಲ್ಲದ ವಿಷಯ ಇಟ್ಟುಕೊಂಡು ಕೋಮು ಸಂಘರ್ಷದ ದಳ್ಳುರಿಗೆ ಕಿಚ್ಚು ಹೆಚ್ಚುತ್ತಿರುವ, ಸಾಮಾಜಿಕ ಸ್ವಾಸ್ತ್ಯವನ್ನು ಹದಗೆಡಿಸುತ್ತಿರುವ ಮಥಾಯಿ ರವರನ್ನು ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದರ ಜತೆಗೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಅಪಾರ್ಟ್ಮೆಂಟ್ ನ ನಿವಾಸಿ ಎಸ್.ಕೆ.ಬಾಷಾ ಮಾತನಾಡಿ ‘ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಮಥಾಯಿವರು ಹೇಳುವ ರೀತಿಯಲ್ಲಿ ಯಾವ ಅಂಶವೂ ಇಲ್ಲ. ಇಲ್ಲಿನ ನಿವಾಸಿಗಳೆಲ್ಲರೂ ಅಣ್ಣತಮ್ಮಂದಿರಂತೆ ಅನ್ಯೂನ್ಯವಾಗಿದ್ದಾರೆ. ನಮ್ಮ ಇಪ್ತಿಯಾರ್ ಕೂಟಕ್ಕೆ ಹಿಂದೂ, ಕ್ರೈಸ್ತ, ಜೈನ, ಸಿಖ್ ಧರ್ಮದ ನಮ್ಮ ಸ್ನೇಹಿತರನ್ನು ಆಹ್ವಾನಿಸುತ್ತೇವೆ. ಹಾಗೆಯೇ ಗಣೇಶ ಚತುರ್ಥಿ, ದುರ್ಗಾ ಪೂಜೆ, ದೀಪಾವಳಿ ಹಬ್ಬಗಳಿಗೆ ನಮ್ಮ ಹಿಂದೂ ಸ್ನೇಹಿತರು ನಮ್ಮನ್ನು ಆಹ್ವಾನಿಸುತ್ತಾರೆ ಎಲ್ಲರೂ ಒಟ್ಟುಗೂಡಿ ಹಬ್ಬ ಆಚರಿಸುತ್ತೇವೆ. ಇಂತಹ ಭಾವೈಕ್ಯತೆಯ ವಾತಾವರಣವನ್ನು ಕಲುಷಿತ ಗೊಳಿಸುವ ಪ್ರಯತ್ನವನ್ನು ಮಥಾಯಿಯವರು ಬಿಡಬೇಕು. ತುಳಸೀ ಕಟ್ಟೆ ಹಿಂದಿನಿಂದಲೂ ಇಲ್ಲಿದೆ, ಅದಕ್ಕೆ ಪೂಜೆ ಸಲ್ಲಿಸುವುದು ಸಹ ಇದೆ, ಇಲ್ಲಿನ ನಿವಾಸಿಗಳೆಲ್ಲರೂ ಅನ್ಯೂನ್ಯತೆಯ ಜತೆಗೆ ಶ್ರದ್ಧೆಯಿಂದ  ತಮ್ಮ ಧರ್ಮ ಆಚರಿಸುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಮಥಾಯಿ ಯವರು ಮೊಸರಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡುವುದು ಬೇಡ ಎಂದರು.

ಪ್ರತಿಭಟನೆಯಲ್ಲಿ ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಮುನಿದಾಸಪ್ಪ, ಬಿಜೆಪಿ ಮುಖಂಡ ಅಶೋಕ್, ಸಿ ಎಲ್ ಎನ್ ಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮುನಿಲಕ್ಷ್ಮಮ್ಮ ಪರಶುರಾಮ್, ಭಾಗ್ಯಮ್ಮ ಈಶ್ವರಾಚಾರ್, ಮಾಜಿ ಉಪಾಧ್ಯಕ್ಷೆ ಪದ್ಮ ಮುನಿಕೃಷ್ಣ, ಸಂಜಯ್, ಸತೀಶ್ ದುಬೆ, ಪವನ್, ಯೂಸುಫ್ ಸೋಗಿ, ಅರುಣ್, ಚೊಕ್ಕನಹಳ್ಳಿ ನಾಗೇಶ್, ರಮೇಶ್ ಸೇರಿದಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಅಪಾರ್ಟ್ಮೆಂಟ್ ನ ನಿವಾಸಿಗಳು ಹಾಗೂ ಸ್ಥಳೀಯ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *