ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಬಡಜನತೆಗೆ ಜಕ್ಕೂರು ರವಿಕುಮಾರ್ ಸಲಹೆ

ಬ್ಯಾಟರಾಯನಪುರ : ಬಡಜನರ ಕಲ್ಯಾಣಕ್ಕಾಗಿ ಸರ್ಕಾರ ನೀಡಿರುವ ಯಶಸ್ವಿನಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹಜ್ಯೋತಿ, ಆಶ್ರಯ ಯೋಜನೆಯಂಥ ಜನೋಪಯೋಗಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಬಡಜನತೆ ಉತ್ತಮ ಬದುಕು ರೂಪಿಸಿ ಕೊಳ್ಳುವಂತಾಗಬೇಕು ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಜಿ.ಪಂ.ಅಧ್ಯಕ್ಷ ಜಕ್ಕೂರು ರವಿಕುಮಾರ್ ಬಡಜನತೆಗೆ ಸಲಹೆ ನೀಡಿದರು.

ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಸೋಮವಾರ ಜಕ್ಕೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 86ಕ್ಕೂ ಹೆಚ್ಚು ಬಡವರಿಗೆ ಉಚಿತ ಯಶಸ್ವಿನಿ ಕಾರ್ಡ್ ವಿತರಿಸಿ ಅವರು ಮಾತನಾಡಿ ‘ಯಶಸ್ವಿನಿ ಆರೋಗ್ಯ ಯೋಜನೆ ಕೇಂದ್ರ ಸರ್ಕಾರದ ಒಂದು ಉತ್ತಮ ಯೋಜನೆ ಯಾಗಿದ್ದು, ಈ ಯೋಜನೆಯ ಅಡಿಯಲ್ಲಿ ಇಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ 86ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಯಶಸ್ವಿನಿ ಕಾರ್ಡಗಳನ್ನು ವಿತರಿಸಲಾಗಿದೆ. ಈ ಯಶಸ್ವಿನಿ ಕಾರ್ಡ್ ನಿಂದ ಸರ್ಕಾರ ಗುರುತಿಸಿ ರುವ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದು ಕುಟುಂಬ ವಾರ್ಷಿಕವಾಗಿ 5 ಲಕ್ಷದ ವರೆಗಿನ ಆರೋಗ್ಯ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ.

ಕರ್ನಾಟಕದಲ್ಲಿ 616 ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಿದ್ದು, ಬೆಂಗಳೂರು ನಗರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಮಹಾವೀರ್ ಜೈನ್ ಆಸ್ಪತ್ರೆ, ಎಂ.ಎಸ್.ರಾಮಯ್ಯ ಆಸ್ಪತ್ರೆ ಸೇರಿದಂತೆ ಯಶಸ್ವಿನಿ ನೆಟ್ವರ್ಕ್ ಉಳ್ಳ 41 ಪ್ರತಿಷ್ಠಿತ ಆಸ್ಪತ್ರೆಗಳಿವೆ. ಈ ಯಶಸ್ವಿನಿ ಕಾರ್ಡ್ ನಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಗುರುತಿಸಿರುವ 1650 ಚಿಕಿತ್ಸೆ, 478 ಐಸಿಯು ಚಿಕಿತ್ಸೆಗಳು ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಯಶಸ್ವಿನಿ ಕಾರ್ಡ್ ಒಳಗೊಂಡಿದೆ. ಹೃದ್ರೋಗ ಸೇರಿದಂತೆ ಹಲವು ಮಹಾ ಖಾಯಿಲೆಗಳಿಗೆ ಈ ಯಶಸ್ವಿನಿ ಕಾರ್ಡ್ ಬಳಸಿ ಪ್ರತಿಷ್ಠಿತ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪದಾಧಿಕಾರಿಗಳಾದ ನಾಗರಾಜಪ್ಪ, ವಿನೋದ್ ಕುಮಾರ್ ವ್ಯಾಸ, ಬಿ.ಜಿ.ರಮೇಶ್, ಮಾರುತಿ, ರತ್ನಮ್ಮ, ಸುಮಿತ್ರಮ್ಮ, ರವೀಂದ್ರನಾಥ್ ಗೌಡ, ಶ್ರೀಮಾಲಾ ವಿ.ಭಟ್, ವೀಣಾ, ಚಂದ್ರಶೇಖರ್, ಆಂಜಿನಪ್ಪ, ಕೃಷ್ಣಪ್ಪ, ಸೊಸೈಟಿಯ ಸಿಇಒ ರಾಕೇಶ್, ವ್ಯವಸ್ಥಾಪಕಿ ಯಶೋಧ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *