
ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಸಂಸ್ಥೆಯಿಂದ ಅದ್ವೈತ ಸಿದ್ದಾಂತ ಉಪನ್ಯಾಸ ಕಾರ್ಯಕ್ರಮ :
ಬೆಂಗಳೂರು : ಸೆ.4ರಂದು ನಡೆಯಲಿರುವ ಶೃಂಗೇರಿ ಮಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗಳ ಸನ್ಯಾಸ ದೀಕ್ಷೆ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಉಲುಚಕಮ್ಮೆ ಬ್ರಾಹ್ಮಣ ಮಹಾಸಭೆಯ ಅಂಗಸಂಸ್ಥೆಯಾದ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಸಂಸ್ಥೆಯ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ವಿಚಾರಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವೇ.ಬ್ರ.ಶ್ರೀ ಮಂಕಾಲ ಶ್ರೀಹರಿ ಶರ್ಮಾ ರವರು ಅದೈತ ಸಿದ್ಧಾಂತ ಮತ್ತು ಶಂಕರಾಚಾರ್ಯರ ಬದುಕು, ಸಾಧನೆ, ತಾತ್ವಿಕ ವಿಚಾರಗಳ ಕುರಿತು ಮನೋಜ್ಞವಾಗಿ ಉಪನ್ಯಾಸ ನೀಡಿದರು.
ಉಪನ್ಯಾಸದಲ್ಲಿ ಮಾತನಾಡಿದ ಅವರು ‘ಪ್ರತಿ ಮನುಷ್ಯ ನಾವು ಶಾಶ್ವತರಲ್ಲ, ನಮಗೆ ಸಾವಿದೆ ಎಂಬುದನ್ನು ಸ್ಮರಿಸಿಕೊಂಡೇ ಬದುಕಬೇಕು ಹಾಗಾದಾಗ ಮಾತ್ರ ಬದುಕು ಸರಿಯಾದ ದಾರಿಯಲ್ಲಿ ಸಾಗುತ್ತದೆ ಎಂದರು.
ಶಂಕರ ಪದದ ಅರ್ಥವಿವರಣೆ ಮಾಡಿದ ಅವರು ಶಂಕರ ಎಂದರೆ ವೈಶಾಖ ಮಾಸದಲ್ಲಿ ಹುಟ್ಟಿದ ಸರ್ವ ಶ್ರೇಷ್ಠ ಮಹಾಪುರುಷ ಎಂದರ್ಥ. ಶಂಕರಾ ಚಾರ್ಯರ ವಿಷಯದಲ್ಲಿ 8ರ ಸಂಖ್ಯೆ ಮಹತ್ವದ್ದಾಗಿದೆ. ಶಂಕರಾಚಾರ್ಯರು 8ನೇ ವರ್ಷಕ್ಕೆ ಸನ್ಯಾಸ ದೀಕ್ಷೆ ಪಡೆದರು, 16ನೇ ವಯಸ್ಸಿಗೆ ಚತುರ್ವೇದ, ಉಪನಿಷತ್ತು, ಬ್ರಾಹ್ಮಣಕಗಳು, ಅರಣ್ಯಕಗಳಲ್ಲಿ ಪಾರಂಗತ ರಾದರು, 24ನೇ ವಯಸ್ಸಿಗೆ ಅದ್ವೈತ ಸಿದ್ಧಾಂತ ಪ್ರತಿಪಾದನೆ ಮಾಡಿ, ಲೋಕಸಂಚಾರ ಮಾಡುತ್ತಾ ಅದ್ವೈತ ಸಿದ್ದಾಂತ ಕುರಿತು ಪ್ರಚಾರ ಮಾಡಿದರು. 32ನೇ ವಯಸ್ಸಿಗೆ ಸ್ವರ್ಗಸ್ಥರಾದರು ಎಂದು ವಿವರಿಸಿದರು.
ಸಾಕ್ಷಾತ್ ಶಿವನೇ ಭುವಿಯ ಮೇಲೆ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿ, ಲೋಕಕಲ್ಯಾಣ ಮಾಡಿದರು. ಶಂಕರರು ಹುಟ್ಟುವ ವೇಳೆ ಓಂಕಾರ ನಾದ ಮೊಳಗಿತು, ಸಾಕ್ಷಾತ್ ಶಂಕರನೇ ನಿಮ್ಮ ಉದರದಲ್ಲಿ ಜನಿಸಿದ್ದಾನೆ ಎಂಬ ದೈವವಾಣಿ ಶಂಕರಾಚಾರ್ಯರ ತಾಯಿಗೆ ಕೇಳಿಸಿತ್ತು, ಅವರು ಜಗದ್ಗುರುವಾಗಿ ಲೋಕಕಲ್ಯಾಣ ಮಾಡಲಿದ್ದಾರೆ ಎಂಬ ವಿಚಾರ ಅವರ ತಾಯಿಗೆ ತಿಳಿದಿತ್ತು. ವೇದೋ ಪನಿಷತ್ತುಗಳಿಗೆ ಧಕ್ಕೆಯಾಗುವ ಪ್ರಮೇಯ ಬಂದಾಗ ಶಂಕರಾಚಾರ್ಯರು ಜನ್ಮತಳೆದು, ಅವುಗಳ ರಕ್ಷಣೆಗೆ ನಿಲ್ಲುತ್ತಾರೆ, ಅವುಗಳ ಪ್ರಚಾರ ಮಾಡುತ್ತಾರೆ ಎಂದು ಶಂಕರಾಚಾರ್ಯರ ಬಗ್ಗೆ ಮತ್ತು ಅವರ ಅದ್ವೈತ ಸಿದ್ಧಾಂತದ ಬಗ್ಗೆ ಮನೋಜ್ಞವಾಗಿ ಉಪನ್ಯಾಸ ಮಾಡಿದರು.