ಬ್ಯಾಟರಾಯನಪುರ : ಕ್ಷೇತ್ರದ ಕೊಡಿಗೇಹಳ್ಳಿಯಲ್ಲಿರುವ ಶಾಸಕರ ಗೃಹ ಕಚೇರಿಯ ಜತೆಗೆ ಕ್ಷೇತ್ರದ ಜನತೆಯ ಕಂದಾಯ ಇಲಾಖೆಯ ಕುಂದುಕೊರತೆಗಳನ್ನು ಆಲಿಸಲು, ಇಲಾಖೆಯ ಅಗತ್ಯ ಸೇವೆಗಳನ್ನು ನಿರ್ವಹಿಸಲು ಇನ್ನೊಂದು ಹೆಚ್ಚುವರಿ ಕಚೇರಿ ಆರಂಭಿಸುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸಹಕಾರನಗರದ ಶ್ರೀ. ವಿನಾಯಕ ದೇವಸ್ಥಾನದ  ಆವರಣದಲ್ಲಿ ಸಹಕಾರನಗರದ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆಯೋಜಿಸಿದ್ಧ  ಅಭಿನಂದನಾ ಸಮಾರಂಭದಲ್ಲಿ ವಿವಿಧ ಸಂಘಸಂಸ್ಥೆಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಯ ಕುಂದುಕೊರತೆ ಆಲಿಸಲು ಕ್ಷೇತ್ರದಲ್ಲಿ ಪ್ರತ್ಯೇಕ ಕಚೇರಿ : 

ಕ್ಷೇತ್ರದ ಜನತೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 38 ಸಾವಿರಕ್ಕೂ ಹೆಚ್ಚು ಬಹುಮತ ನೀಡಿ ಗೆಲ್ಲಿಸಿರುವುದಕ್ಕೆ ಕ್ಷೇತ್ರದ ಜನತೆಗೆ ಅಭಾರಿಯಾಗಿದ್ದೇನೆ. ಕ್ಷೇತ್ರದ ಜನತೆಯ ಋಣ ತೀರಿಸುವುದು ನನ್ನ ಆಧ್ಯ ಕರ್ತವ್ಯವೆಂದು ಭಾವಿಸಿದ್ದೇನೆ, ಕ್ಷೇತ್ರದ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಜತೆಗೆ ಮಾದರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಜನರ ಕುಂದುಕೊರತೆಗಳನ್ನು ಆಲಿಸಲು ಈಗಿರುವ ಶಾಸಕರ ಗೃಹ ಕಚೇರಿಯ ಜತೆಗೆ ಕ್ಷೇತ್ರದಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳು, ಮತ್ತು ಜನರ ಕುಂದುಕೊರತೆಗಳನ್ನು ಆಲಿಸಲು ಹೆಚ್ಚುವರಿ ಕಚೇರಿ ಆರಂಭಿಸಿ, ಜನರಿಗೆ ಅಗತ್ಯ ಸೇವೆಯನ್ನು ಒದಗಿಸಲು ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಹಕಾರನರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸಹಕಾರ ನಗರ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಡಿಫೆನ್ಸ್ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಆರ್ಯ ವೈಶ್ಯ ಮಿತ್ರ ವೃಂದ, ಬಸವ ಬಳಗ, ಅಖಿಲ ಭಾರತ ವೀರಶೈವ ಮಹಾಸಭಾ, ಸಹಕಾರನಗರ ಹೌಸಿಂಗ್ ಸೊಸೈಟಿ, ಸಹಕಾರನಗರ ಸ್ಪೋರ್ಟ್ಸ್ ಕ್ಲಬ್, ಗಾಯತ್ರಿ ಮಿತ್ರ ವೃಂದ, ವಾಯುಪುತ್ರ ಆಟೋಚಾಲಕರ ಸಂಘ, ಸಹಕಾರನಗರ ಬೀದಿ ವ್ಯಾಪಾರಿಗಳ ಸಂಘ, ಸಹಕಾರ ನಗರ ಹಿರಿಯ ನಾಗರೀಕರ ವೇದಿಕೆ ಸೇರಿದಂತೆ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ನೂತನ ಸಚಿವ ಕೃಷ್ಣಬೈರೇಗೌಡ ರವರಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಮೀನಾಕ್ಷಿ ಕೃಷ್ಣಬೈರೇಗೌಡ, ಸಹಕಾರ ನಗರ ನಿವಾಸಿಗಳ  ಸಂಘದ ಅಧ್ಯಕ್ಷ ದೇವರಾಜಪ್ಪ,  ಸ.ಹೌ.ಸೊ.ಅಧ್ಯಕ್ಷ ಬಾಲರಾಜು, ಸಿದ್ದೇಶ್ ಗೌಡ, ದೇವರಾಜ್, ಆರ್ಯ ವೈಶ್ಯ ಮಿತ್ರ ವೃಂದದ ಶಿವರಾಮ್ ಶೆಟ್ಟಿ, ವೆಂಕನಗೌಡ,ಅ.ಭಾ.ವೀ.ಮಹಾಸಭಾದ ಡಾ.ಗುರುಸ್ವಾಮಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಿದ್ದರು.

Leave a Reply

Your email address will not be published. Required fields are marked *