






ಯಲಹಂಕ : ಮಳೆ, ಚಳಿಯನ್ನು ಲೆಕ್ಕಿಸದೆ ಎಂತಹ ಸಂಕಷ್ಟದ ಕಾಲದಲ್ಲೂ ಕಾರ್ಯನಿಷ್ಠೆ ತೋರುವ ಪತ್ರವಿತರಕರದ್ದು ಸವಾಲಿನ ಕೆಲಸ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯ ಪಟ್ಟರು.
ದಿನಪತ್ರಿಕೆ ವಿತರಕರ ಸಂಘ ಯಲಹಂಕ, ಇವರ ವತಿಯಿಂದ ಯಲಹಂಕ ಉಪನಗರದಲ್ಲಿ ಶನಿವಾರ ಆಯೋಜಿಸಿದ್ದ ದಿನಪತ್ರಿಕೆ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ನಸುಕಿನ ಬೆಳಗಿನ ಜಾವದಲ್ಲಿ ಎದ್ದು ಕಾರ್ಯಮಗ್ನರಾಗುವ ಪತ್ರಿಕೆ ವಿತರಕರದ್ದು ಸೂರ್ಯನನ್ನೇ ನಾಚುವಂತೆ ಮಾಡುವ ಕರ್ತವ್ಯನಿಷ್ಠೆ. ಅವರ ವೈಯಕ್ತಿಕ ಕಷ್ಟಗಳೇನೇ ಇರಲಿ, ಅವುಗಳಿಗೆ ಕಿವಿಗೊಟ್ಟು ಕೂರುವ ಜಾಯಮಾನ ಪತ್ರಿಕಾ ವಿತರಕರದ್ದಲ್ಲ. ಯಲಹಂಕ ಪತ್ರಿಕಾ ವಿತರಕರನ್ನು ನಾನೆಂದೂ ವಿತರಕರಂತೆ ಭಾವಿಸಿಲ್ಲ, ನನ್ನ ಸಹೋದರರೋಪಾದಿಯಲ್ಲಿ ಭಾವಿಸಿದ್ದೇನೆ. ಕಳೆದ 17 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಪತ್ರಿಕಾ ವಿತರಕರಿಗೆ ಮನೆಗಳನ್ನು ನೀಡಿದ್ದೇನೆ, ಅವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅವರು ಆಹ್ವಾನಿಸಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸಿದ್ದೇನೆ. ಯಲಹಂಕ ಪತ್ರಿಕಾ ವಿತರಕರ ಒಗ್ಗಟ್ಟು ಅಚ್ಚುಮೆಚ್ಚೆನಿಸುತ್ತದೆ. ವಿತರಕರ ಬೇಡಿಕೆಯಂತೆ ಯಲಹಂಕದಲ್ಲಿ ವಿತರಿಕರ ಭವನ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದ್ದು, ಅದ್ಯಾವ ಕಾರಣಕ್ಕಾಗಿ ವಿತರಕರ ಭವನ ನಿರ್ಮಾಣ ಕಾರ್ಯ ವಿಳಂಬವಾಗಿದೆಯೋ ತಿಳಿಯದು, ಈ ಕುರಿತು ಮಾಹಿತಿ ಪಡೆದು ಮುಂದಿನ ಆರು ತಿಂಗಳಲ್ಲಿ ವಿತರಕರ ಭವನ ನಿರ್ಮಾಣ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೆ ವಿತರಿಸುವ ಹುಡುಗರಿಗೆ ಸೈಕಲ್,ಸಾಧ್ಯತೆಯಿದ್ದರೆ ಬೈಕ್, ವ್ಯಾಸಂಗ ನಿರತ ಹುಡುಗರಿಗೆ ಶೈಕ್ಷಣಿಕ ನೆರವು ನೀಡುವಂತೆ ವಿತರಕರು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಸಾಲಿನ ಅತ್ಯುತ್ತಮ ಕಾರ್ಯನಿಷ್ಠೆಗಾಗಿ ಹಿರಿಯ ವಿತರಕರಾದ ರಮೇಶ್, ಶಂಕರ್ ಪಿ.ಕೆ.ಎಸ್., ಕುಮಾರ್, ರಾಜಶೇಖರರೆಡ್ಡಿ, ರವೀಂದ್ರ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಪತ್ರಿಕೆ ವಿತರಣೆ ಕೆಲಸ ಮಾಡುತ್ತಲೇ ವ್ಯಾಸಂಗದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪವನ್ ಮತ್ತು ಸುಮಂತ್ ಶ್ರೀವತ್ಸ ಎಂಬ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ‘ದಿನಪತ್ರಿಕೆ ವಿತರಕರ ಸಂಘ ಯಲಹಂಕ’ ದ ಅಧ್ಯಕ್ಷ ಎಂ ಸತೀಶ್, ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗ, ‘ದಿನಪತ್ರಿಕೆ ವಿತರಕರ ಸಂಘ ಯಲಹಂಕ’ದ ಇತರೆ ಪದಾಧಿಕಾರಿಗಳಾದ ವೀರಭದ್ರ ವೈ. ಸಿ., ಶಂಕರ್, ಮಂಜುನಾಥ್, ಪ್ರಶಾಂತ್, ವೆಂಕಟೇಶ್ ಮೂರ್ತಿ, ಉಮೇಶ್, ವೀರೇಶ್, ಶಶಿ, ರವೀಂದ್ರಕುಮಾರ್, ಪ್ರದೀಪ್, ಮನು, ದೇವರಾಜ್, ನವೀನ್, ಮುನಿರಾಜು, ಚಂದ್ರು, ಮಧು, ಪವನ್ ಸೇರಿದಂತೆ ಎಲ್ಲಾ ಪತ್ರಿಕೆ ವಿತರಕರು, ಅವರ ಕುಟುಂಬ ವರ್ದಗದವರು ಹಾಗೂ ಪತ್ರಿಕೆ ಹಾಕುವ ಹುಡುಗರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
Public power
R Hanumanthu
Kogilu layout
Yelahanka
9845085793
7349337989
9035282296