ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023ರ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ ವನ್ನು ಆಚರಿಸಲಾಯಿತು.
2023ರ ಘೋಷವಾಕ್ಯ-“ಜನರು ಮೊದಲು, ಕಳಂಕ ಮತ್ತು ತಾರತಮ್ಯ ನಿಲ್ಲಿಸಿ, ತಡೆಗಟ್ಟುವಿಕೆಯನ್ನು ಬಲಗೊಳಿಸಿ .” ಹೊಸಕೋಟೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮುಖ್ಯ ಉಪನ್ಯಾಸಕಾರರಾಗಿ ಮಾತನಾಡುತ್ತಾ ಯುವಜನತೆಯಲ್ಲಿ ಮಾದಕ ದ್ರವ್ಯ ಗಳ ವ್ಯಸನಕ್ಕೆ ಕಾರಣಗಳು, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಆಗುವ ದುಷ್ಪರಿಣಾಮಗಳು, ಸಂಸ್ಕಾರವಂತ ಆರೋಗ್ಯಕರ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮುಂತಾದ ವಿಷಯಗಳ ಬಗ್ಗೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡುತ್ತ, ” ಕ್ಷಣಿಕ ಸುಖದ ಮತ್ತಿನಲ್ಲಿ ಜೀವನವನ್ನೇ ಹಾಳುಗೆಡುವದಿರಿ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸೂಲಿಬೆಲೆ ಪೊಲೀಸ್ ಠಾಣೆಯ ವೃತ್ತ ಆರಕ್ಷಕ ನಿರೀಕ್ಷಕರಾದ ಶ್ರೀ ರವಿ, ಪ್ರಾಂಶುಪಾಲರಾದ ಶ್ರೀ ಮೋಹನ್ ಕುಮಾರ್,ಹೊಸಕೋಟೆ ತಾಲ್ಲೂಕು ರಾಷ್ಟ್ರೀಯ ಬಾಲಸ್ವಾಸ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳಾದ ಡಾ. ಶ್ವೇತಾ,ಡಾ. ಶಕುಂತಲಾ, ಡಾ. ಜ್ಯೋತಿ,ಶುಶ್ರೂಷಕ ಅಧಿಕಾರಿ ಶ್ರೀ ಮಂಜುನಾಥ,ಕಾಲೇಜಿನ ವಿವಿಧ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
