ಸಾರ್ವಜನಿಕ ಬಂಡಿದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಗಣ್ಯರು ಹಾಗು ಅಧಿಕಾರಿಗಳ ಬಳಿ ಮನವಿ ಮಾಡಿದ ಯುವ ಮುಖಂಡ ಎನ್.ಐ.ಬಿ. ಶಿವರಾಜ್ ಮಹದೇವಪುರ : ಬಿದರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುವ ಮನೆಗೆ ಸಾರ್ವಜನಿಕ ರಸ್ತೆ ಇಲ್ಲದೇ ಅತೀವ ತೊಂದರೆ ಅನುಭವಿಸುತ್ತಿರುವ ಗ್ರಾಮದ ಮೂಲ ನಿವಾಸಿಗಳಾದ ಕಾಂತಮ್ಮ ಕೋಂ ಶಾಮಪ್ಪ ಮತ್ತು ಕುಟುಂಬಸ್ಥರು ತಮ್ಮ ಗ್ರಾಮಠಾಣ ಜಾಗದಲ್ಲಿ ಈ ಮೊದಲೇ ಒತ್ತುವರಿ ಆಗಿದ್ದಂತಹ ಸಾರ್ವಜನಿಕ ಬಂಡಿದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಈ ರೀತಿಯಾಗಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಿ, ಮೇಲ್ಮನವಿ ಪ್ರಾಧಿಕಾರ ಅಪೀಲು ಸಂಖ್ಯೆ: ಸಿ.ಆರ್.02/2021-22 ರಂತೆ ತಾಲ್ಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳ ನ್ಯಾಯಾಲಯದಲ್ಲಿ ಮೇಲ್ಮನವಿದಾರರು ದಾವೆ ಹೂಡಿದ್ದರು. ಸದರಿ ಕುಟುಂಬಸ್ಥರ ಮೇಲ್ಮನವಿಯನ್ನು ಅಂಗೀಕರಿಸಿದ ನಿಕಟಪೂರ್ವ ಕಾರ್ಯ ನಿರ್ವಾಹಣಾಧಿಕಾರಿಗಳಾದ ಶ್ರೀ ಮಂಜುನಾಥ್ ರವರು ಬಂಡಿದಾರಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವಂತೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶವಾಗಿ ಒಂದು ವರ್ಷ ವಿಳಂಬವಾದರೂ ಸಹ ಇಲ್ಲಿಯತನಕ ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳು ಇ.ಓ. ನ್ಯಾಯಾಲಯದ ಆದೇಶಕ್ಕೆ ಅನುಸಾರವಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಈ ಸಾರ್ವಜನಿಕ ಸಮಸ್ಯೆಯನ್ನು ಮುನ್ನೆಲೆಗೆ ತಂದು ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರದ ನೂತನ ಶಾಸಕರು, ನೂತನ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಮಕ್ಷಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮುಖೇನ ಇ.ಓ. ಆದೇಶವನ್ನು ಆದಷ್ಟು ಬೇಗನೆ ಜಾರಿಗೊಳಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಗಣ್ಯರು ಹಾಗೂ ಅಧಿಕಾರಿಗಳ ಬಳಿ ಎನ್.ಐ.ಬಿ. ಶಿವರಾಜ್ ರವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಪಂಚಾಯತಿ ಸದಸ್ಯರು, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಹಾಗೂ ಮೇಲ್ಮನವಿದಾರರು ಒಳಗೊಂಡಂತೆ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ನಾಗರಿಕರು ಗ್ರಾಮಸಭೆಯಲ್ಲಿ ಹಾಜರಿದ್ದರು.
