








ವಿಶ್ವಮಹಿಳಾ ದಿನಾಚರಣೆ ಪ್ರಯುಕ್ತ 500 ಮಹಿಳೆಯರಿಗೆ ತವರುಮನೆ ಉಡುಗೊರೆ :
ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಆಯೋಜನೆ :
ಬ್ಯಾಟರಾಯನಪುರ : ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ, ಸಚಿವ ಕೃಷ್ಣಬೈರೇಗೌಡ ಅವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ, ಜಕ್ಕೂರು ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಜಿ.ಪಂ.ಅಧ್ಯಕ್ಷ ಜಕ್ಕೂರು ರವಿಕುಮಾರ್ ಅವರು ಸುಮಾರು 500 ಮಹಿಳೆಯರಿಗೆ ತವರುಮನೆ ಉಡುಗೊರೆಯಾಗಿ ಸೀರೆ, ಕುಪ್ಪಸ, ಅರಿಶಿನ, ಕುಂಕುಮ, ಫಲ ತಾಂಬೂಲ ಸಹಿತ ಬಾಗಿನ ಅರ್ಪಿಸಿ ಗೌರವಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮೀನಾಕ್ಷಿ ಕೃಷ್ಣಬೈರೇಗೌಡ ಅವರು ಮಾತನಾಡಿ ‘ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸ್ವಾವಲಂಬಿ ಗಳಾಗಬೇಕು, ಈ ದಿಸೆಯಲ್ಲಿ ಅಡುಗೆ ಮನೆಗಷ್ಟೇ ಸೀಮಿತವಾಗದೆ, ಉತ್ತಮ ಶಿಕ್ಷಣ ಪಡೆದು, ಪಡೆದ ಶಿಕ್ಷಣ ವ್ಯರ್ಥವಾಗದಂತೆ ವಿವಿಧ ಉದ್ಯೋಗಳಲ್ಲಿ ತೊಡಗಿಕೊಳ್ಳಬೇಕು, ತನ್ಮೂಲಕ ಮಹಿಳೆಯರು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ ಮತ್ತು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಜಿ.ಪಂ.ಅಧ್ಯಕ್ಷ ಜಕ್ಕೂರು ರವಿಕುಮಾರ್ ಮಾತನಾಡಿ ‘ಕಳೆದ ಹಲವು ವರ್ಷಗಳಿಂದಲೂ ಮಹಿಳಾ ದಿನಾಚರಣೆ ಕಾರ್ಯಕ್ರಮದಂದು ಮಹಿಳೆಯರಿಗೆ ತವರುಮನೆ ಉಡುಗೊರೆ ನೀಡಿ ಗೌರವಿಸುವುದನ್ನು ಆಚರಿಸಿಕೊಂಡು ಬರುತ್ತಿದ್ದೇನೆ. ದಶಕಗಳ ಹಿಂದೆ ಸಮುದಾಯ ಭವನ ಟ್ರಸ್ಟ್ ಆಗಲಿ, ಸಹಕಾರ ಸಂಘವಾಗಲಿ ಯಾವುದೂ ಇರಲಿಲ್ಲ, ಅಂತಹ ಕಷ್ಟದ ದಿನಗಳಲ್ಲಿ ಐವತ್ತು ಮಹಿಳೆಯರಿಂದ ಆರಂಭವಾದ ತವರುಮನೆ ಉಡುಗೊರೆ ಸಮಾರಂಭವು ಇಂದು ಐನೂರು ಮಹಿಳೆಯರಿಗೆ ಬಂದು ತಲುಪಿದೆ. ಸಹಕಾರ ಸಂಘ ಆರಂಭವಾದ ನಂತರ ಮಹಿಳೆಯರಿಗೆ ಒಂದಷ್ಟು ನೆರವು, ಆರ್ಥಿಕ ಶಕ್ತಿ ತಂಬಲು ಸಹಕಾರಿಯಾಗಿದೆ. ಸಹಕಾರ ಸಂಘದಲ್ಲಿ 2 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು ಕಳೆದ ವರ್ಷ ಮುನ್ನೂರು ಮಹಿಳೆಯರಿಗೆ ತವರುಮನೆ ಉಡುಗೊರೆ ನೀಡಲಾಗಿತ್ತು, ಈ ಬಾರಿ ಐನೂರು ಮಹಿಳೆಯರಿಗೆ ವಿಸ್ತರಿಸಲಾಗಿದೆ. ಮಹಿಳಾ ಮುಖಂಡರಿಗೂ ಸಹ ತವರುಮನೆ ಉಡುಗೊರೆ ನೀಡಿ ಗೌರವಿಸಿರುವಿದು ಈ ಬಾರಿಯ ವಿಶೇಷತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೇಣುಕಾ ಪಾಟೀಲ್, ಅಮೃತಹಳ್ಳಿ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಜ್ಯೋತಿ, ವಿದ್ಯಾಶ್ರೀ, ಶಿಕ್ಷಕರಾದ ಕೋಮಲ ಜಿ.ಎನ್., ಬಿ.ಜಿ.ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಸಮಂತ ಲಿಂಗರಾಜು ಜಿ.ಪಿ., ಸಮಾಜ ಸೇವಕರಾದ ಕೃತಿ ಹರೀಶ್ ಜೋಡಿದಾರ್, ಜಕ್ಕೂರು ಬ್ರಹ್ಮಕುಮಾರಿ ಸೇವಾ ಕೇಂದ್ರದ ಬಿ.ಕೆ.ಪವಿತ್ರ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದಿವ್ಯ ರಾಜಣ್ಣ, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಸುಮಿತ್ರ ನಾಗೇಶ್, ವೀಣಾ ಆರ್.ವೆಂಕಟೇಶ್, ರತ್ನಮ್ಮ ದೇವರಾಜ್, ಶ್ರೀಮಾಲಾ ವಿ.ಭಟ್ ಸೇರಿದಂತೆ ಹಲವು ಗಣ್ಯರಿದ್ದರು.