ಟಿಎಪಿಸಿಎಂಎಸ್ ನ 74ನೇ ಸರ್ವ ಸದಸ್ಯರ ಸಭೆ,1ಕೋಟಿಗೂ ಅಧಿಕ ಲಾಭ,ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹೊಸಕೋಟೆ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ರೈತರ ಸಹಕಾರದಿಂದ ಉತ್ತಮ ಲಾಭ ಗಳಿಸಿದ್ದು, ಈ ಬಾರಿ, ಷೇರುದಾರರಿಗೆ ಶೇ.10 ರಿವಿಡೆಂಡ್ ನೀಡಲಾಗುವುದು ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ಬಾಬು ರೆಡ್ಡಿ ತಿಳಿಸಿದರು. ನಗರದ ಖಾಸಗಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ 74ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರೈತರಿಗೆ ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಮಾರಾಟ ಮಾಡುವ ಮೂಲಕ ಸಹಕಾರ ಸಂಘ ಉತ್ತಮ ರೀತಿ ವ್ಯವಹಾರ ಮಾಡುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ನಂದಗುಡಿ ಭಾಗದಲ್ಲಿ ಗೊಬ್ಬರ ದಾಸ್ತಾನು ಮಳಿಗೆ ನಿರ್ಮಾಣ ಮಾಡಲಾಗುವುದು. ಹಾಗೆಯೇ ಸಹಕಾರ ಸಂಘದಿಂದ ರೈತರಿಗೆ ಸಹಕಾರವಾಗಲೆಂದು ಬ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ಕಾರ್ಯ ನಿರ್ವಹಿಸಲಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು. ಶಾಸಕ ಶರತ್ ಬಚ್ಚೇಗೌಡ ರವರು ಮಾತನಾಡಿ, ಬೆಂಗಳೂರು ಬೆಳೆದಂತೆ ಹೊಸಕೋಟೆಯೂ ಅಭಿವೃದ್ಧಿ ಹೊಂದುತ್ತಿದೆ. ರೈತರ ಸಂಖ್ಯೆ ಕಡಿಮೆಯಾಗಿದೆ. ಎನ್ನುವ ಭಾವನೆಯನ್ನು ಟಿಎಪಿಸಿಎಂಎಸ್‌ ತೊಡೆದುಹಾಕಿದ್ದು, ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಮೂಲಕ ರೈತರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು. ವ್ಯಾಪಾರ ವಹಿವಾಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿಎಪಿಸಿಎಂಎಸ್‌ಗೆ ಗೋದಾಮು ನಿರ್ಮಾಣಕ್ಕೆ ಈಗಾಗಲೇ ನಗರದ ಹೊರವಲಯದ ಗೊಣಕನಹಳ್ಳಿಬಳಿ 2 ಎಕರೆ ಜಾಗ ಮಂಜೂರು ಮಾಡಲಾಗಿತ್ತು, ಈಗ ಹೆಚ್ಚುವರಿಯಾಗಿ ಇನ್ನೂ ಎರಡು ಎಕರೆ ಜಾಗ ಮಂಜೂರು ಮಾಡಲಾಗಿದ್ದು, ಪಕ್ಕದಲ್ಲೇ ಸುಮಾರು 25 ಏಕರೆ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಎಪಿಎಂಸಿ ಹಾಗೂ ಟಿಎಪಿಸಿಎಂಎಸ್ ಜಾಗದ ಪಕ್ಕದಲ್ಲಿ ಚೆನ್ನೈ ಸೂಪರ್ ಎಕ್ಸ್ ಪ್ರೆಸ್ ಹೈವೇ ನಿರ್ಮಾಣವಾಗಲಿದ್ದು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಸಹಕಾರಿಯಾಗಲಿದೆ. ಜತೆಗೆ ಪಕ್ಕದ ಟಿಎಪಿಸಿಎಂಎಸ್ ನಲ್ಲಿ ರಸಗೊಬ್ಬರ, ಬೀಜ ಹೀಗೆ ರೈತರಿಗೆ ಅನುಕೂಲ ಆಗುವ ಗೋದಾಮು ನಿರ್ಮಾಣ ಮಾಡುವುದರಿಂದ ರೈತರಿಗೆ ವರದಾನವಾಗಲಿದ್ದು, ಮುಂದಿನ ದಿನಗಳಲ್ಲಿ ಅಗ್ರಿಕಲ್ಟರ್ ಪಾರ್ಕ್ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು. ಸಂಘದ 2022-23ನೇ ಸಾಲಿನ ವರದಿಮಂಡಿಸಿದ ಟಿಎಪಿಸಿಎಂಎಸ್‌ ವ್ಯವಸ್ಥಾಪಕ ಸೋಮಣ್ಣ ಮಾತನಾಡಿ, ಸಹಕಾರ ಸಂಘದಲ್ಲಿ 6,479 ಸದಸ್ಯರಿದ್ದು, 35.70 ಕೋಟಿ ಷೇರು ಬಂಡವಾಳ ಹೊಂದಿದೆ. 2022-23ನೇ ಸಾಲಿನಲ್ಲಿ 53,65 ಕೋಟಿ ರೂ. ವ್ಯಾಪಾರ ವಹಿವಾಟು ನಡೆಸಿದ್ದು, 3,40 ಕೋಟಿ ರೂ., ವ್ಯಾಪಾರ ಲಾಭಗಳಿಸಿದ್ದು, ಇದರಲ್ಲಿ 1,02 ಕೋಟಿ ರೂ. ನಿವ್ವಳಲಾಭ ಹೊಂದಿದೆ ಎಂದರು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಟಿಎಪಿಸಿಎಂಎಸ್ ನಿರ್ದೇಶಕರಾದ ಎಚ್‌. ಕೆ ರಮೇಶ್, 'ಸಿ ಮುನಿಯಪ್ಪ, ಹನುಮಂತೇಗೌಡ, ಅಂಜಿನಪ್ಪ, ನಾಗರಾಜ್, ಸುರೇಶ್‌, ಸವಿತಾ ಗೋಪಾಲ್, ರಾಣಿ ರಾಮಚಂದ್ರ, ಸತೀಶ್ ಗೌಡ, ಎನ್. ಸುರೇಶ್, ಎಲ್‌.ಎಂಟಿ ಮಂಜುನಾಥ್, ದೇವೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *