ಹೊಸಕೋಟೆಯಲ್ಲಿ ತಾಲ್ಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಾಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ ಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳು ಹಾಗೂ ಹೊಸಕೋಟೆ ತಾಲೂಕು ನೋಡಲ್ ಅಧಿಕಾರಿಗಳಾದ ಡಾ. ನಾಗೇಶ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಜನಸಂಖ್ಯಾ ನಿಯಂತ್ರಣದಲ್ಲಿ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದು ಆರೋಗ್ಯ ಇಲಾಖೆಯು ಶಾಶ್ವತ ಹಾಗೂ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತ ಜನಸಂಖ್ಯಾ ನಿಯಂತ್ರಣದಲ್ಲಿ ಕ್ಷೇತ್ರ ಮಟ್ಟದ ಕಾರ್ಯಕರ್ತರು ಹೆಚ್ಚು ಶ್ರಮಪಡಬೇಕೆಂದು ಕರೆ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವೀಣಾ ರವರು ಮಾತನಾಡುತ್ತಾ ಹೊಸಕೋಟೆ ತಾಲೂಕಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಭಾಗ,ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈಗಾಗಲೇ ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿಗಳು ಕರಪತ್ರಗಳೊಂದಿಗೆ ಗುಂಪು ಸಭೆಗಳು,ತಾಯಂದಿರ ಸಭೆಗಳು, ಮಾಸಿಕ ಸಭೆಗಳು ಹೀಗೆ ಎಲ್ಲಾ ಹಂತದಲ್ಲೂ ಜಾಗೃತಿಯನ್ನು ಮೂಡಿಸಿ, ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಅರ್ಹ ಫಲಾನುಭವಿಗಳನ್ನು ಕರೆತರುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹೊಸಕೋಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಸತೀಶ್ ರವರೊಂದಿಗೆ ಆಗಮಿಸಿದ್ದ ಸ್ತ್ರೀ ರೋಗ ತಜ್ಞರಾದ ಡಾ.ಸಬೀನಾ ಭಾನು ರವರು ಕುಟುಂಬ ಕಲ್ಯಾಣ ವಿಧಾನದ ಬಗ್ಗೆ ವಿವರಿಸಿದರು. ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಸ್ವತಂತ್ರ ಪೂರ್ವದ ಮತ್ತು ಸ್ವತಂತ್ರ ನಂತರದ ನಮ್ಮ ದೇಶದ ಜನಸಂಖ್ಯಾ ಅಂಕಿ ಅಂಶಗಳು, ಜನಸಂಖ್ಯಾ ಸ್ಪೋಟದಿಂದ ಆಗುವ ದುಷ್ಪರಿಣಾಮಗಳು, ಯುವ ಜನತೆಯ ಪಾತ್ರ ಮುಂತಾದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಹೊಸಕೋಟೆ ತಾಲೂಕಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 38 ವರ್ಷಗಳಿಂದ ಸೇವೆ ಸಲ್ಲಿಸಿದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರತ್ನಮ್ಮ ರವರನ್ನು ಈ ಸಮಯದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹೊಸಕೋಟೆ ತಾಲೂಕ್ ಪಂಚಾಯಿತಿಯ ಶ್ರೀ ವಿಜಯಕುಮಾರ್, ನಗರ ಸಭೆಯ ಶ್ರೀ ಆಂಜಿನಪ್ಪ, ರಾಷ್ಟ್ರೀಯ ಬಾಲಸ್ವಾಸ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಸದರಿ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜಯಲಕ್ಷ್ಮಿ ರವರು ಅಚ್ಚುಕಟ್ಟಾಗಿ ನಿರೂಪಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು.
