

ದಿ ಎಡ್ಜ್ ಆಫ್ ನ್ಯೂಟ್ರಿಷನ್ 2024 ಸಮಾವೇಶದಲ್ಲಿ ಹೊಸ ಕಾಲದ ಪೌಷ್ಟಿಕತೆ ಟ್ರೆಂಡ್ ಗಳ ಕುರಿತು ಚರ್ಚೆ ನಡೆಸಿದ ಹ್ಯಾಪಿಯೆಸ್ಟ್ ಹೆಲ್ತ್ ಎಡ್ಜ್
- ಈ ಸಮಾವೇಶದಲ್ಲಿ ಪೌಷ್ಟಿಕತೆ ಕುರಿತಾದ ಈ ಕಾಲದ ಮತ್ತು ಹೊಸ ಕಾಲದ ಟ್ರೆಂಡ್ ಗಳು ಮತ್ತು ಆವಿಷ್ಕಾರಗಳ ಬಗ್ಗೆ ತಜ್ಞರು ಸಂವಾದ ನಡೆಸಿದರು
ಬೆಂಗಳೂರು, 7 ಜುಲೈ 2024: ಹ್ಯಾಪಿಯೆಸ್ಟ್ ಹೆಲ್ತ್ಸ್ ನಾಲೆಡ್ಜ್ ಸಂಸ್ಥೆಯು ಇಂದು ಪೌಷ್ಟಿಕ ತಜ್ಞರು, ವೈದ್ಯರು, ಎಂಜಿನಿಯರ್ಗಳು, ವಿದ್ಯಾರ್ಥಿಗಳು ಹಾಗೂ ವಿವಿಧ ಆರೋಗ್ಯ ಮತ್ತು ಕ್ಷೇಮ ವಿಭಾಗದ ಹಿನ್ನೆಲೆಯ ಆರೋಗ್ಯ ಪ್ರಜ್ಞೆ ಇರುವ ವ್ಯಕ್ತಿಗಳನ್ನು ಒಟ್ಟುಗೂಡಿಸಿ ಎರಡನೇ ಆವೃತ್ತಿಯ ದಿ ಎಡ್ಜ್ ಆಫ್ ನ್ಯೂಟ್ರಿಷನ್ 2024 ಸಮಾವೇಶವನ್ನು ಆಯೋಜಿಸಿತ್ತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಹಾಜರಿದ್ದು, ಪ್ರಸ್ತುತ ವಿಚಾರಗಳ ಹಲವಾರು ಗೋಷ್ಠಿಗಳು, ಸಂವಾದಾತ್ಮಕ ಚರ್ಚೆಗಳಲ್ಲಿ ಭಾಗವಹಿಸಿ ಜ್ಞಾನವರ್ಧನೆ ಮಾಡಿಕೊಂಡರು. ವೈವಿಧ್ಯಮಯ ಹಿನ್ನೆಲೆಯ ವ್ಯಕ್ತಿಗಳ ಜೊತೆಗೆ ಪರಿಚಯ ಮಾಡಿಕೊಂಡರು. ಪೌಷ್ಟಿಕತೆ ವಿಚಾರದಲ್ಲಿನ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳು, ಆಹಾರದ ಟ್ರೆಂಡ್ ಗಳು, ಉತ್ತಮ ಜೀವನಶೈಲಿಗಾಗಿ ಪರ್ಯಾಯ ಡಯಟ್ ಗಳು, ಜನರಿಗೆ ಕಡಿಮೆ ತಿಳಿದಿರುವ ಪೌಷ್ಟಿಕತೆ ಸಲಹೆಗಳು, ಎಚ್ಚರಿಕೆಯ ಆಹಾರ ಸೇವನೆ ಇತ್ಯಾದಿ ವಿಚಾರಗಳ ಕುರಿತು ಗೋಷ್ಠಿಗಳು ನಡೆದವು. ದೇಶದ ವಿವಿಧ ಕಡೆಗಳಿಂದ ಬಂದಿದ್ದ ತಜ್ಞರು ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಗತಿಗಳ ಕುರಿತು ತಿಳಿಸಿದರು. ಆರೋಗ್ಯಕರ ಆಹಾರ ಸೇವನೆ ಮತ್ತು ಬದುಕಿನ ಕುರಿತು ಪ್ರಾಯೋಗಿಕ ಜ್ಞಾನವನ್ನು ಹಂಚಿಕೊಂಡರು.
ಇತ್ತೀಚಿನ ವರ್ಷಗಳಲ್ಲಿ ಪೌಷ್ಟಿಕತೆ ಅಥವಾ ನ್ಯೂಟ್ರಿಷನ್ ಮತ್ತು ಅದರಿಂದ ಉಂಟಾಗುವ ಪ್ರಯೋಜನಗಳ ಕುರಿತು ಜನರ ಗಮನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಹೊಸ ಕಾಲದ ಪೌಷ್ಟಿಕತೆ ಮತ್ತು ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ತಿಳಿದಿರುವ ಜನ ಸಮುದಾಯವನ್ನು ಬೆಳೆಸಲು ಹಾಗೂ ಒಟ್ಟಾರೆ ಸಮಗ್ರ ವಿಧಾನವನ್ನು ಹೊಂದುವ ಸಲುವಾಗಿ ದಿ ಎಡ್ಜ್ ಆಫ್ ನ್ಯೂಟ್ರಿಷನ್ 2024 ಸಮಾವೇಶ ಆಯೋಜಿಸಿತ್ತು. ಇಲ್ಲಿ ವಿವಿಧ ವಿಚಾರಗಳ ಚರ್ಚೆಗಳು, ರಸಪ್ರಶ್ನೆ ಮತ್ತು ವಿಶುವಲ್ ಗಳನ್ನು ಬಳಸಿ ನಡೆಸಲ್ಪಟ್ಟ ಸಂವಾದಾತ್ಮಕ ಗೇಮ್ ಶೋ ಇತ್ಯಾದಿಗಳು ನಡೆದವು.
ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನ ನಾಲೆಡ್ಜ್ ಪ್ರೆಸಿಡೆಂಟ್ ಮತ್ತು ಸಿಇಓ ಅನಂದ್ಯಾ ಚೌಧರಿ, “ಪೌಷ್ಟಿಕತೆಯು ಹ್ಯಾಪಿಯೆಸ್ಟ್ ಹೆಲ್ತ್ ಗಮನ ಹರಿಸುವ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಜನರು ಹೇಗೆ ತಿನ್ನುತ್ತಾರೆ ಮತ್ತು ಅವರು ಏನು ತಿನ್ನುತ್ತಾರೆ ಎಂಬುದರ ಕುರಿತು ಹೆಚ್ಚು ತಿಳಿದುಕೊಳ್ಳುವ ಕುತೂಹಲಕಾರಿ, ಆಧುನಿಕ ದಾರಿಗಳನ್ನು ಜನರಿಗೆ ತಲುಪಿಸಲು ನಾವು ಉತ್ಸಾಹಿತರಾಗಿದ್ದೇವೆ. ಕಳೆದ ವರ್ಷ ನಡೆದ ದಿ ಎಡ್ಜ್ ಆಫ್ ನ್ಯೂಟ್ರಿಷನ್ ಸಮಾವೇಶದಲ್ಲಿ ಆ ಉದ್ದೇಶ ಸಫಲಗೊಳಿಸಲು ಯಶಸ್ವಿಯಾಗಿದ್ದೆವು. ಆ ಹುಮ್ಮಸ್ಸಿನಲ್ಲಿ ಈ ವರ್ಷ ಆಹಾರ ಮತ್ತು ಪೌಷ್ಟಿಕತೆ ವಿಚಾರದಲ್ಲಿನ ಹೆಚ್ಚಿನ ಪ್ರಗತಿಯನ್ನು ಈ ಮೂಲಕ ತಿಳಿಸಲು ನಾವು ಸಂತೋಷಪಡುತ್ತೇವೆ. ಈ ಸಮಾವೇಶವು ಜನರಿಗೆ ಅವರ ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತ ಉತ್ತಮವಾದ, ಸ್ಪಷ್ಟವಾದ ಒಳನೋಟಗಳನ್ನು ನೀಡಿದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಐಸಿಎಂಆರ್) ನಿರ್ದೇಶಕಿ ಡಾ.ಹೇಮಲತಾ ಆರ್, ಪೌಷ್ಠಿಕತೆ ಅಥವಾ ನ್ಯೂಟ್ರಿಷನ್ ವಿಚಾರದಲ್ಲಿ ಆಗಿರುವ ಕ್ರಾಂತಿಕಾರಿ ಬದಲಾವಣೆ ಕುರಿತು ಬೆಳಕು ಚೆಲ್ಲಿ ಮುಂದಿನ ಹಾದಿಯ ಕುರಿತು ತಿಳುವಳಿಕೆಯುಕ್ತ ಮಾತುಗಳನ್ನು ಆಡಿದರು. ಅವರು ಮಾತನಾಡುತ್ತಾ, “ನಾವು ಸಬ್ಸಿಡಿಗಳನ್ನು ಅಂದ್ರೆ ಸಹಾಯ ಧನಗಳನ್ನು ನೀಡುವ ಮೂಲಕ ಆರೋಗ್ಯಕರ ಆಹಾರಗಳ ಉತ್ಪಾದನೆ, ಮಾರ್ಕೆಟಿಂಗ್ ಮತ್ತು ಮಾರಾಟವನ್ನು ಹೆಚ್ಚಿಸಬೇಕಾಗಿದೆ. ಆ ಮೂಲಕ ಆರೋಗ್ಯಕರ ಆಹಾರಗಳಿಗೆ ಹೆಚ್ಚು ಪ್ರೋತ್ಸಾಹಕರ ವಾತಾವರಣ ಉಂಟು ಮಾಡಬೇಕು. ಸೂಪರ್ ಮಾರ್ಕೆಟ್ ಗಳಲ್ಲಿ ಪಾಲುದಾರಿಕೆಯನ್ನು ಮಾಡಿಕೊಂಡು ಅಲ್ಲಿ ಆರೋಗ್ಯಕರ ಪರ್ಯಾಯ ಆಹಾರಗಳನ್ನು ಹೆಚ್ಚು ಪ್ರದರ್ಶಿಸುವಂತೆ ಮಾಡಿ ಉತ್ತೇಜನ ನೀಡಬೇಕು. ಸ್ಥಳೀಯವಾಗಿ ಉತ್ಪಾದಿಸುವ ಸುಸ್ಥಿರ ಆಹಾರ ವ್ಯವಸ್ಥೆಗಳಿಗೆ ಬೆಂಬಲ ನೀಡಬೇಕು. ಸ್ಥಳೀಯ ಆಹಾರ ಉತ್ಪಾದನೆ ಮತ್ತು ವಿತರಣಾ ಜಾಲಗಳನ್ನು ಪ್ರೋತ್ಸಾಹಿಸಿ ತಾಜಾ ಆಹಾರ ಪದಾರ್ಥಗಳ ಲಭ್ಯತೆಯನ್ನು ಹೆಚ್ಚಿಸಬೇಕು. ಸಣ್ಣ ಪ್ರಮಾಣದ ರೈತರಿಗೆ ಮತ್ತು ಸ್ಥಳೀಯ ಆಹಾರ ವ್ಯವಹಾರಗಳಿಗೆ ಆರ್ಥಿಕ ಮತ್ತು ಸಾಗಾಣಿಕೆ ನೆರವನ್ನು ನೀಡಬೇಕು. ಸ್ಥಳೀಯ ಪ್ರದೇಶಗಳ ಸಾಂಸ್ಕೃತಿಕ ಪರಂಪರೆ ಮತ್ತು ಪಾಕಪದ್ಧತಿಗಳನ್ನು ಉಳಿಸಲು ಆಯಾ ಪ್ರದೇಶದ ಫ್ಲೇವರ್ ಗಳುಳ್ಳ ಆಹಾರಗಳನ್ನು ಹೆಚ್ಚು ಸಂಭ್ರಮಿಸಬೇಕು” ಎಂದು ಅವರು ಹೇಳಿದರು.
ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶಗಳ ಸೇವನೆಯ ಬಗ್ಗೆಯೂ ಮಾತನಾಡಿದ ಅವರು, “ಕಾರ್ಬೋಹೈಡ್ರೇಟ್ಗಳಿಂದ ದಿನಕ್ಕೆ ಒಟ್ಟು 50 ರಿಂದ 55 ಪ್ರತಿಶತ ಕ್ಯಾಲೊರಿಗಳಷ್ಟು ಎನರ್ಜಿ ಸಿಕ್ಕಿದರೆ ಸಾಕಾಗಿರುತ್ತದೆ. ಸಕ್ಕರೆ ಅಂಶವು ದಿನಕ್ಕೆ ಬೇಕಾದ ಒಟ್ಟು ಕ್ಯಾಲೊರಿಗಳ ಶೇಕಡಾ ಐದಕ್ಕಿಂತ ಕಡಿಮೆಯಿರಬೇಕು. ಅಂದರೆ ಒಟ್ಟು ಎರಡು ಸಾವಿರ ಕಿಲೋ ಕ್ಯಾಲೋರಿ ಆಹಾರಕ್ಕೆ ದಿನಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಗ್ರಾಂ ಸಕ್ಕರೆಯನ್ನು ಉತ್ಪಾದಿಸುತ್ತದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಪ್ರೊಫೆಸರ್ ಮತ್ತು ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ ರೆಬೆಕಾ ರಾಜ್, ಬ್ಯುಸಿ ಇರುವ ವೃತ್ತಿಪರರು ಪಾಲಿಸ ಬೇಕಾದ ಪೌಷ್ಟಿಕ ವಿಚಾರಗಳನ್ನು ಮಾತನಾಡಿ, “ನಿಮ್ಮ ಊಟವನ್ನು ಪ್ಲಾನ್ ಮಾಡಿ. ಹಾಗಂತ ಭರ್ಜರಿ ಊಟ ಪ್ಲಾನ್ ಮಾಡಬೇಕಾಗಿಲ್ಲ, ಯಾಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಸಣ್ಣ ಪ್ರಮಾಣದ ಊಟಗಳನ್ನು ಪ್ಲಾನ್ ಮಾಡಿ. ನೀವು ತುಂಬಾ ಬ್ಯುಸಿ ಇದ್ದರೆ, ರಿಮೈಂಡರ್ ಹಾಕಿಟ್ಟಿರಿ. ಮತ್ತು ಕೆಲಸದಲ್ಲಿರುವಾಗ ಆರೋಗ್ಯಕರ ತಿಂಡಿಯನ್ನೇ ಸೇವಿಸಿ” ಎಂದು ಹೇಳಿದರು.
ಮಾತು ಮುಂದುವರಿಸಿ ನಿಷ್ಕ್ರಿಯರಾಗಿರುವ ಅಪಾಯಗಳ ಕುರಿತು ತಿಳಿಸಿ ದೈಹಿಕ ಚಟುವಟಿಕೆ ಮಾಡಲು ಬ್ರೇಕ್ ತೆಗೆದುಕೊಳ್ಳುವ ಅವಶ್ಯಕತೆಗಳನ್ನು ಹೇಳಿದರು. ಈ ಕುರಿತು ಅವರು, “ದೈಹಿಕವಾಗಿ ನಿಷ್ಕ್ರಿಯವಾಗಿ ಇರುವುದು ನಾಲ್ಕನೇ ಅತಿ ದೊಡ್ಡ ಕೊಲೆಗಾರ ಎಂಬುದನ್ನು ಮಾಹಿತಿ ಹೇಳುತ್ತದೆ. ಬರೂ ಕುಳಿತುಕೊಂಡೇ ಇರುವುದು ಧೂಮಪಾನದಷ್ಟೇ ಕೆಟ್ಟದ್ದು. ನಾವು ಕ್ರೀಡಾಪಟುಗಳಲ್ಲದಿದ್ದರೆ ಜಡ ಜೀವನಶೈಲಿಯನ್ನು ಹೊಂದಿರುತ್ತೇವೆ, ಅದು ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಉದಾಹರಣೆಗೆ ಜೀರ್ಣಕ್ರಿಯೆ ಕಡಿಮೆ ಆಗುವುದು. ನಾವು ಹೆಚ್ಚು ಕ್ರಿಯಾಶೀಲರಾಗಿ ಇರಬೇಕು” ಎಂದು ಹೇಳಿದರು.
ಪೌಷ್ಟಿಕ ತಜ್ಞೆ ಮತ್ತು ಲೇಖಕಿ ಡಾ. ನಂದಿತಾ ಅಯ್ಯರ್ ಮತ್ತು ಪೌಷ್ಟಿಕ ತಜ್ಞೆ ಮತ್ತು ಆರೋಗ್ಯ ಹಾಗೂ ಆಹಾರ ತರಬೇತುದಾರೆ ಅನುಪಮಾ ಮೆನನ್ ಪೌಷ್ಟಿಕತೆಯಲ್ಲಿನ ಹೊಸ ಟ್ರೆಂಡ್ ಗಳು ಮತ್ತು ಆವಿಷ್ಕಾರಗಳ ಕುರಿತು ನಡೆದ ಗೋಷ್ಟಿಯಲ್ಲಿ ಪಾಲ್ಗೊಂಡರು. ಪೌಷ್ಠಿಕತೆ, ಸಸ್ಯ-ಆಧರಿತ ಆಹಾರ ಮತ್ತು ಸಸ್ಯಾಹಾರಿ ಆಹಾರದ ಅಭಿವೃದ್ಧಿಯಲ್ಲಿ ಎಐ ಬಳಕೆಯ ಕುರಿತು ಈ ಗೋಷ್ಠಿಯಲ್ಲಿ ಸಂವಾದ ನಡೆಸಲಾಯಿತು.
ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್, ರಿಯಾನ್ ಫೆರ್ನಾಂಡೋ ಅವರು ಡಿಜಿಟಲ್ ಯುಗದಲ್ಲಿ ನ್ಯೂಟ್ರಿಷನ್ ಎಂಬ ವಿಚಾರದ ಕುರಿತು ಗೋಷ್ಠಿ ನಡೆಸಿದರು. ಈ ಗೋಷ್ಠಿಯಲ್ಲಿ ಅವರು, “ರೋಗ ತಡೆಗಟ್ಟುವ ಕ್ಷೇತ್ರದಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಅಗಾಧವಾದ ಉದ್ಯೋಗಾವಕಾಶವಿದೆ ಎಂಬುದು ನನ್ನ ನಂಬಿಕೆ. ಈ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನ ಕಟ್ಟಲು ನೀವು ಹಂಬಲಿಸಿದರೆ ಎಐ ಮತ್ತು ತಂತ್ರಜ್ಞಾನವು ನಿಮಗೆ ಶ್ರೇಷ್ಠರಾಗಲು ನೆರವು ನೀಡುತ್ತದೆ. ಆದರೆ ನೀವು ಸಹಾನುಭೂತಿ ಹೊಂದಿರಲು ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಜಲು ನಿಮ್ಮೊಳಗಿನ ಮಾನವತ್ವ ನಿಮ್ಮನ್ನು ಕೈ ಹಿಡಿದು ನಡೆಸುತ್ತದೆ” ಎಂದು ಹೇಳಿದರು.
ಆರೋಗ್ಯ ಪ್ರಜ್ಞೆಯುಳ್ಳ ವ್ಯಕ್ತಿಗಳಿಗೆ ಆರೋಗ್ಯ ಮತ್ತು ಕ್ಷೇಮ ಕ್ಷೇತ್ರದ ಕುರಿತು ಹೆಚ್ಚು ಅರಿವು ಮೂಡಿಸಲು ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಜ್ಞಾನ ಸಮಾವೇಶಗಳನ್ನು ಆಯೋಜಿಸುತ್ತದೆ. ಈ ಉದ್ದೇಶಕ್ಕೆ ಪೂರಕವಾಗಿಯೇ ಎಡ್ಜ್ ಆಫ್ ನ್ಯೂಟ್ರಿಷನ್ ಸಮವೇಶವನ್ನು ಆಯೋಜಿಸಲಾಗಿತ್ತು ಮತ್ತು ಸಮಾವೇಶವು ಜನರು ಉತ್ತಮ ಆರೋಗ್ಯ ಹೊಂದಲು ಬೇಕಾದ ಒಳನೋಟಗಳನ್ನು ಒದಗಿಸಿತು ಮತ್ತು ಆರೋಗ್ಯ ಹಾಗೂ ಜೀವನಶೈಲಿಯ ವಿಚಾರದಲ್ಲಿ ಹೆಚ್ಚು ಗಮನ ಹರಿಸಲು ಪ್ರೇರೇಪಣೆ ನೀಡಿತು.