ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ ದಿಂದ ವಿಶ್ವ ಶೈಕ್ಷಣಿಕ ರುವಾರಿ ವಿಭಾಗದ ಪ್ರಶಸ್ತಿ: ಯಲಹಂಕ: ಮನುಜಕುಲ ಒಂದೇ’ ಎಂಬ ಧ್ಯೇಯದಿಂದ ಸ್ಥಾಪಿತವಾದ ‘ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ’ದ ವಿಶ್ವದ ಶೈಕ್ಷಣಿಕ ರೂವಾರಿ ವಿಭಾಗದ ಜೀವಮಾನದ ಸಾಧನೆಯ ಪ್ರಶಸ್ತಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಹಿರಿಯ ಸಲಹೆಗಾರ ಪ್ರೊ. ಎನ್.ಆರ್. ಶೆಟ್ಟಿ ಭಾಜನರಾಗಿದ್ದಾರೆ. ಅಮೆರಿಕಾದ ವರ್ಜೀನಿಯಾ ರಾಜ್ಯದ ಪೀಸ್ ಪೆಂಟಗಾನ್ನಲ್ಲಿರುವ ‘ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ’ದ ಪ್ರಧಾನ ಕಛೇರಿಯು, 47ನೇ ಪೃಥ್ವಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿಶ್ವದೆಲ್ಲೆಡೆ ಆಯ್ದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು, ಈ ಸಾಧಕರಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಹಿರಿಯ ಸಲಹೆಗಾರ ಪ್ರೊ.ಎನ್.ಆರ್.ಶೆಟ್ಟಿಯವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಮತ್ತು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆಚ್.ಸಿ.ನಾಗರಾಜ್ರವರಿಗೆ ‘ಶಿಕ್ಷಕ-ಬದಲಾವಣೆಯ ರುವಾರಿ’ ಪ್ರಶಸ್ತಿ ದೊರೆತಿದೆ.ಜೂನ್ 27ರಂದು ರಂದು 47ನೇ ಪೃಥ್ವಿ ಸಂವಿಧಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ ದ ಜಾಗತಿಕ ಉಪಾಧ್ಯಕ್ಷ ಪ್ರೊ.ಇ.ಪಿ.ಮೆನನ್ ಪ್ರೊ.ಎನ್.ಆರ್.ಶೆಟ್ಟಿ ಮತ್ತು ಡಾ.ಹೆಚ್.ಸಿ.ನಾಗರಾಜ್ರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ‘ವಾಷಿಂಗ್ಟನ್ನಲ್ಲಿರುವ ವಿಶ್ವ ತಾಂತ್ರಿಕ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ, ಭಾರತದ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿ, ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿ ಪ್ರೊ. ಎನ್.ಆರ್. ಶೆಟ್ಟಿ ಅವರು ಸಲ್ಲಿಸಿರುವ ಅನುಪಮ ಸೇವೆಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲು ನಮ್ಮ ಕಛೇರಿ ನಿರ್ಧರಿಸಿದೆ, ಎಂದು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪ್ರೊ. ಇ.ಪಿ. ಮೆನನ್ ಮೆಚ್ಚಿಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ಅವರಿಗೆ, ‘ಟೀಚರ್-ಚೇಂಜ್ ಮೇಕರ್’ (ಶಿಕ್ಷಕ-ಬದಲಾವಣೆಯ ರೂವಾರಿ) ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಶ್ವಾದ್ಯಂತ ವಿದ್ಯಾರ್ಥಿ ಬಳಗವನ್ನು ಹೊಂದಿರುವ ಡಾ. ಹೆಚ್.ಸಿ. ನಾಗರಾಜ್ ಅವರ ಹೆಸರನ್ನು ಹತ್ತಾರು ದೇಶಗಳಲ್ಲಿ ನೆಲೆನಿಂತಿರುವ ಅವರ ಶಿಷ್ಯರು ಸೂಜಿಸಿದ್ದರು. ಇದನ್ನು ಪೀಸ್ ಪೆಂಟಗಾನ್ನಲ್ಲಿರುವ ನಮ್ಮ ಮಾತೃ ಸಂಸ್ಥೆ ಪರಿಗಣಿಸಿದೆ ಎಂದು ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ ದ ಕರ್ನಾಟಕದ ಪ್ರತಿನಿಧಿ ಪಿ.ನರಸಿಂಹಮೂರ್ತಿ ಅವರು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ತಿಳಿಸಿದರು. 27 ಜೂನ್ 1977ರಲ್ಲಿ ಅಸ್ತಿತ್ವಕ್ಕೆ ಬಂದ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’ದ ಪೃಥ್ವಿ ಸಂವಿಧಾನದ ಅನುಮೋದನೆಗೆ ಜಗತ್ತಿನ 25 ರಾಷ್ಟ್ರಗಳ 138 ಹಿರಿಯ ಮಾನವತಾವಾದಿಗಳು ಸಹಿಹಾಕಿದ್ದಾರೆ. ಮಾನವೀಯತೆಯನ್ನು ಎತ್ತಿ ಹಿಡಿಯುವ ಹಾಗೂ ರಾಜಕೀಯ ಕಾರಣಕ್ಕಾಗಿ ನಡೆಯುವ ಪರಸ್ಪರ ಯುದ್ಧಗಳನ್ನು ಕೊನೆಗೊಳಿಸುವ ಮಹದೋದ್ದೇಶ ಪೃಥ್ವಿ ಸಂವಿಧಾನದ ಧ್ಯೇಯವಾಗಿದೆ.