ಇಂಡಿ: ಜು.10:ಶಿಕ್ಷಣ ಮನುಷ್ಯನನ್ನು ನಾಗರಿಕನನ್ನಾಗಿಸುವುದಲ್ಲದೇ ದೈಹಿಕ ಮತ್ತು ಅಧ್ಯಾತ್ಮ ಪ್ರಗತಿಗೆ ಪ್ರೇರಣೆ ಕೊಡುತ್ತದೆ.
ಶಿಕ್ಷಕರ ಆಸ್ತಿ ಎಂದರೆ ಮಕ್ಕಳು. ಮಕ್ಕಳಲ್ಲಿ ದೇವರನ್ನು ಕಾಣಬೇಕು. ಅವರಲ್ಲಿ ಪುಸ್ತಕ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನ ಬೆಳೆಸುವ ಪೂರಕ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಯಾಗಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಸಾಮಾನ್ಯನನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡುವ ಶಕ್ತಿ ಕೇವಲ ಗುರುವಿನಲ್ಲಿ ಮಾತ್ರವಿದ್ದು, ಕಲಿಸಿದ ಶಿಕ್ಷಕರಿಗೆ ಗೌರವ ಸಮರ್ಪಿಸುವುದರಿಂದ ಧನ್ಯತಾಭಾವ ಪ್ರಾಪ್ತಿಯಾಗುವುದೆಂದರು.
ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಮಾತನಾಡಿ, ಯಾವುದೇ ಫಲಾಪೇಕ್ಷೆ ಬಯಸದೇ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗಾಗಿ ಶ್ರಮಿಸುವವರು ಶಿಕ್ಷಕರು. ಆದ್ದರಿಂದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು.ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಎಸ್ ಎಚ್ ಮೈದರಗಿ,ಶಿಕ್ಷಕ ಎಸ್ ಎಂ ಮಕಾನದಾರ ಅವರ ಶೈಕ್ಷಣಿಕ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,ಪ್ರತಿ ವಿದ್ಯಾರ್ಥಿಯು ಜೀವನದಲ್ಲಿ ಸ್ಪಷ್ಟವಾದ ಗುರಿ ಹೊಂದಬೇಕು. ಆ ಗುರಿಯನ್ನು ತಲುಪಲು ಗುರುವಿನ ಮಾರ್ಗದರ್ಶನದಲ್ಲಿ ಸಾಗಬೇಕು. ಆಗ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದರು.
ಶಿಕ್ಷಕಿ ಎಸ್ ಎಚ್ ಮೈದರಗಿ, ಶಿಕ್ಷಕ ಎಸ್ ಎಂ ಮಕಾನದಾರ ಶಾಲೆಯ ವತಿಯಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದರು.ಎಸ್ ಡಿ ಎಂ ಸಿ ಅಧ್ಯಕ್ಷ ಸುಭಾನಲ್ಲಾ ಅಂಗಡಿ, ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸಿ ಎಸ್ ಝಳಕಿ, ತೆನಿಹಳ್ಳಿ ಯುಬಿಎಸ್ ಶಾಲಾ ಮುಖ್ಯ ಶಿಕ್ಷಕ ಆರ್ ಎಸ್ ಚಡಚಣಕರ, ಶಿಕ್ಷಕರಾದ ಎಸ್ ಎಸ್ ಅರಬ, ಎಸ್ ಪಿ ಪೂಜಾರಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.